'ಬುಲ್ಲಿ ಬಾಯಿ', 'ಸಲ್ಲಿ ಡೀಲ್ಸ್' ಪ್ರಕರಣದ ಆರೋಪಿಗಳಿಬ್ಬರಿಗೆ ಮಾನವೀಯ ನೆಲೆಯಲ್ಲಿ ಜಾಮೀನು ನೀಡಿದ ದಿಲ್ಲಿ ನ್ಯಾಯಾಲಯ
ಓಂಕಾರೇಶ್ವರ್ ಠಾಕುರ್ / ನೀರಜ್ ಬಿಷ್ಣೋಯಿ (Photo credit:thequint.com)
ಹೊಸದಿಲ್ಲಿ: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣದ ಆರೋಪಿ ನೀರಜ್ ಬಿಷ್ಣೋಯಿ ಮತ್ತು 'ಸಲ್ಲಿ ಡೀಲ್ಸ್' ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕುರ್ ಗೆ ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ಮಾನವೀಯ ನೆಲೆಯಲ್ಲಿ ಜಾಮೀನು ನೀಡಿದೆ.
ಆರೋಪಿಗಳಿಬ್ಬರೂ ಮೊದಲ ಬಾರಿ ತಪ್ಪು ಮಾಡಿದವರು ಹಾಗೂ ಅವರನ್ನು ಬಂಧನದಲ್ಲಿಡುವುದು ಅವರ ಯೋಗಕ್ಷೇಮಕ್ಕೆ ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಆರೋಪಿಗಳಿಬ್ಬರೂ ಯಾವುದೇ ಸಾಕ್ಷಿಗೆ ಬೆದರಿಕೆಯೊಡ್ಡದಂತೆ ಹಾಗೂ ಸಾಕ್ಷ್ಯ ನಾಶಗೈಯ್ಯದಂತೆ ಅವರಿಗೆ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಯಾವುದೇ ಸಂತ್ರಸ್ತರನ್ನು ಆರೋಪಿಗಳು ಸಂಪರ್ಕಿಸಬಾರದು ಅಥವಾ ಒತ್ತಡ ಹೇರಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.
ಆರೋಪಿಯು ತನಿಖಾಧಿಕಾರಿಗೆ ತನ್ನ ಸಂಪರ್ಕ ಮಾಹಿತಿ ನೀಡಬೇಕು, ಫೋನ್ ಅನ್ನು ಸದಾ ಆನ್ ಇಡಬೇಕು ಹಾಗೂ ಇರುವ ಸ್ಥಳದ ಕುರಿತು ತನಿಖಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಜಾಮೀನು ಆದೇಶ ಹೇಳಿದೆ.
ಆರೋಪಿಗಳು ದೇಶ ಬಿಟ್ಟು ತೆರಳುವ ಹಾಗಿಲ್ಲ ಹಾಗೂ ತಿಳಿಸಲಾದ ತಾರೀಕಿನಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಜಾಮೀನು ಆದೇಶ ತಿಳಿಸಿದೆ.