ಟ್ರಸ್ಟ್, ಟ್ರಸ್ಟಿಗಳಿಗೆ ಏಕರೂಪದ ಕಾನೂನು ರಚಿಸಲು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ, ಎ. 13: ಟ್ರಸ್ಟ್ ಹಾಗೂ ಟ್ರಸ್ಟಿಗಳು, ದತ್ತಿಗಳು ಹಾಗೂ ದತ್ತಿ ಸಂಸ್ಥೆಗಳು, ಧಾರ್ಮಿಕ ದತ್ತಿಗಳು ಹಾಗೂ ಸಂಸ್ಥೆಗಳಿಗೆ ಕೇಂದ್ರ ಸರಕಾರ ಏಕರೂಪದ ಕಾನೂನನ್ನು ಮಾತ್ರ ಜಾರಿಗೊಳಿಸಬಹುದು ಎಂದು ನಿರ್ದೇಶಿಸುವಂತೆ ಹಾಗೂ ಘೋಷಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಆದರೂ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ, ಕಾನೂನಿನಲ್ಲಿ ಲಭ್ಯವಿರುವ ಯಾವುದೇ ಪರಿಹಾರ ಪಡೆದುಕೊಳ್ಳುವ ಸ್ವಾತಂತ್ರವನ್ನು ದೂರುದಾರರಿಗೆ ನೀಡಿದೆ. ಅನಂತರ, ದೂರುದಾರ ಅಶ್ವಿನಿ ಕುಮಾರ್ ಉಪಧ್ಯಾಯ ಅವರು ಮನವಿ ಹಿಂಪಡೆದರು.
ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್, ಈ ಕಾನೂನು ರೂಪಿಸುವಂತೆ ಸಂಸತ್ತಿಗೆ ಯಾವುದೇ ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳಿತು. ಎಲ್ಲ ಟ್ರಸ್ಟ್ ಗಳಿಗೆ ಸಾಮಾನ್ಯ ಕಾನೂನು ರೂಪಿಸುವಂತೆ ದೂರುದಾರರು ಕೋರಿದ್ದಾರೆ. ಆದರೆ, ಈ ವಿಷಯ ಸಂಸತ್ತಿನ ವ್ಯಾಪ್ತಿಗೆ ಬರುತ್ತದೆ. ಆದುದರಿಂದ ಈ ಆಯಾಮದಲ್ಲಿ ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಪೀಠ ಹೇಳಿತು.