ಶಿಕ್ಷಣದ ಮೂಲಕ ಸಬಲೀಕರಣಕ್ಕೆ ನಾರಾಯಣ ಗುರು ಹೋರಾಡಿದರು: ಪ್ರಧಾನಿ ಮೋದಿ
ಹೊಸದಿಲ್ಲಿ, ಎ 26: ದೇಶದ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ವೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿಗೆ ಉಪದೇಶಿಸಿದ ಧಾರ್ಮಿಕ ನಾಯಕ, ಚಿಂತಕ ಶ್ರೀ ನಾರಾಯಣ ಗುರು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಹೇಳಿದ್ದಾರೆ.
ಶಿವಗಿರಿ ತೀರ್ಥಯಾತ್ರೆಯ 90ನೇ ವರ್ಷವಾದ ಹಿನ್ನೆಲೆಯಲ್ಲಿ ವರ್ಷಾದ್ಯಂತ ಸಂಭ್ರಮಾಚರಣೆ ಹಾಗೂ ಶಿವಗಿರಿ ಬ್ರಹ್ಮ ವಿದ್ಯಾಲಯದ 50ನೇ ವರ್ಷಾಚರಣೆಯನ್ನು ಉದ್ಘಾಟಿಸಿದ ಮೋದಿ ಅವರು, ವೈಜ್ಞಾನಿಕ ಶಿಕ್ಷಣದ ಮೂಲಕ ಸಮಾಜದ ಸಬಲೀಕರಣ ಕುರಿತು ನಾರಾಯಣಗುರು ಅವರು ಬೋಧಿಸಿದರು. ಆದರೆ, ಸಾಂಸ್ಕೃತಿಕ ವೌಲ್ಯಗಳನ್ನು ಎತ್ತಿ ಹಿಡಿಯುವುದರಲ್ಲಿ ಅವರು ಎಂದೂ ಹಿಂದೆ ಸರಿಯಲಿಲ್ಲ ಎಂದರು. ದಿಲ್ಲಿಯ ಶ್ರೀ ನಾರಾಯಣಗುರು ಧರ್ಮ ಸಂಘಂ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮ ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆಯಿತು.
‘‘ಜಾತಿ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ಅವರು ತಾರ್ಕಿಕ ಹಾಗೂ ಪ್ರಾಯೋಗಿಕ ಹೋರಾಟ ನಡೆಸಿದರು. ಬಡವರು, ದುರ್ಬಲರು ಹಾಗೂ ಹಿಂದುಳಿದವರ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ಅವರ ಸೇವೆ ಮಾಡುವಲ್ಲಿ ನಾವು ಶ್ರೀನಾರಾಯಣ ಗುರುಗಳಿಂದ ಪ್ರೇರಣೆ ಪಡೆದಿದ್ದೇವೆ’’ ಎಂದು ಅವರು ಹೇಳಿದರು.
ನಾರಾಯಣ ಗುರು ಅವರ ‘‘ಒಂದೇ ಜಾತಿ, ಒಂದೇ ಧರ್ಮ ಹಾಗೂ ಒಂದೇ ದೇವರು’’ ತತ್ವ ದೇಶಪ್ರೇಮಕ್ಕೆ ಧಾರ್ಮಿಕ ಆಯಾಮ ನೀಡಿದೆ. ಭಾರತೀಯರು ಅವರ ಬೋಧನೆಗಳನ್ನು ಅನುಸರಿಸಿದರೆ ಹಾಗೂ ಸಂಘಟಿತರಾದರೆ ಜಗತ್ತಿನ ಯಾವುದೇ ಗುರಿ ಅಸಾಧ್ಯವಲ್ಲ ಎಂದು ಪ್ರಧಾನಿ ಅವರು ತಿಳಿಸಿದರು.
ಶಿವಗಿರಿ ಮಠದೊಂದಿಗೆ ತನ್ನ ದೀರ್ಘ ಕಾಲದ ಸಂಬಂಧವನ್ನು ನೆನಪಿಸಿಕೊಂಡ ಅವರು, ಅಲ್ಲಿಗೆ ಭೇಟಿ ನೀಡಿದಾಗ ತನಗೆ ಆಧ್ಯಾತ್ಮಿಕವಾಗಿ ಸಶಸಕ್ತೀಕರಣಗೊಂಡ ಭಾವನೆ ಉಂಟಾಗಿದೆ ಎಂದರು. ಉತ್ತರಾಖಂಡದಲ್ಲಿ 2013ರಲ್ಲಿ ಕೇದಾರನಾಥ್ನಲ್ಲಿ ಸಿಲುಕಿಕೊಂಡ ಸಂತರ ತಂಡವನ್ನು ಪತ್ತೆ ಹಚ್ಚಲು ಹಾಗೂ ರಕ್ಷಿಸಲು ಶಿವಗಿರಿಯಲ್ಲಿದ್ದ ಸಂತರು ಅವಕಾಶ ನೀಡಿರುವುದನ್ನು ಅವರು ನೆನಪಿಸಿಕೊಂಡರು.
‘‘ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇತ್ತು. ರಕ್ಷಣಾ ಸಚಿವರು ಕೇರಳಿಗರಾಗಿದ್ದರು. ನಾನು ಕೇವಲ ಗುಜರಾತ್ನ ಮುಖ್ಯಮಂತ್ರಿಯಾಗಿದ್ದರೂ ಸಂತರನ್ನು ರಕ್ಷಿಸುವ ಹೊಣೆಯನ್ನು ಶಿವಗಿರಿ ಮಠ ನನಗೆ ನೀಡಿತು. ಈ ಹೊಣೆಗಾರಿಕೆ ನೀಡಿರುವುದನ್ನು ನಾನು ಎಂದಿಗೂ ಮರೆಯಲಾರೆ’’ ಎಂದು ಅವರು ಹೇಳಿದರು.