ಜಾತಿನಿಂದನೆಗೈದು ದಲಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ತಡೆ: ಮೂವರು ಆರೋಪಿಗಳ ಬಂಧನ
ಭೋಪಾಲ್: ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ಚಂದಪುರ ಗ್ರಾಮದಲ್ಲಿ ದಲಿತ ಕುಟುಂಬವೊಂದಕ್ಕೆ ಮೃತ ಸಂಬಂಧಿಯ ಅಂತ್ಯಸಂಸ್ಕಾರ ನಡೆಸಲು ಅಡ್ಡಿಪಡಿಸಿದ ಆರೋಪದ ಮೇಲೆ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಲಿತ ಕುಟುಂಬವು ಮೃತ 70 ವರ್ಷದ ಕನಯ್ಯಾ ಅಹಿರ್ವರ್ ಎಂಬವರ ಕಳೇಬರವನ್ನು ರುದ್ರಭೂಮಿಗೆ ಕೊಂಡೊಯ್ದಾಗ ಅಲ್ಲಿ ಆರೋಪಿಗಳು ಅವರನ್ನು ತಡೆದಿದ್ದರಲ್ಲದೆ ಅವರು `ಕೆಳ ಜಾತಿಗೆ' ಸೇರಿದವರು ಎಂದು ಅವಮಾನಿಸಿದ್ದಾರೆಂದು ಆರೋಪಿಸಲಾಗಿದೆ.
ಕಳೇಬರವನ್ನು ಅಲ್ಲಿರುವ ವೇದಿಕೆಯಲ್ಲಿ ಸುಡುವ ಬದಲು ಅಂಗಳದಲ್ಲಿಯೇ ಸುಡುವಂತೆ ಅವರಿಗೆ ಹೇಳಲಾಯಿತು ಎಂದು ಮಿಷನ್ ಅಂಬೇಡ್ಕರ್ ಸ್ಥಾಪಕ ಸೂರಜ್ ಕುಮಾರ್ ಬೌದ್ಧ್ ಆರೋಪಿಸಿದ್ದಾರೆ. ಕೊನೆಗೆ ಬಡ ಕುಟುಂಬ ಉಪಾಯವಿಲ್ಲದೆ ರುದ್ರಭೂಮಿ ಸಮೀಪದ ತೆರೆದ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಿದೆ.
ಬಂಧಿತ ಆರೋಪಿಗಳಾದ ನಾರಾಯಣ್ ಸಿಂಗ್ ಮೀನಾ, ರಂಭಾರೋಸ್ ಮೀನಾ ಮತ್ತು ದಿಲೀಪ್ ಮೀನಾ ಅವರ ವಿರದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
Next Story