ದೇಶದ್ರೋಹದ ಕಾನೂನು ಮರುಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಅಫಿಡವಿಟ್ನಲ್ಲಿ ತಿಳಿಸಿದ ಕೇಂದ್ರ
ಹೊಸದಿಲ್ಲಿ: ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 124ಎ ಅನ್ನು ಪುನರ್ ಪರಿಶೀಲಿಸಿ ಪುನರ್-ಪರಿಗಣಿಸುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಹೇಳಿದೆ.
ಸುಪ್ರೀಂ ಕೋರ್ಟಿಗೆ ಈ ಕುರಿತು ಸರಕಾರ ಅಫಿಡವಿಟ್ ಸಲ್ಲಿಸಿದೆಯಲ್ಲದೆ ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭ ʼವಸಾಹತುಶಾಹಿ ಪಳೆಯುಳಿಕೆʼ ಯನ್ನು ಕೈಬಿಡುವ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯಾನುಸಾರ ಈ ಕಾನೂನನ್ನು ಮರುಪರಿಗಣಿಸುವುದಾಗಿ ಹೇಳಿದೆಯಲ್ಲದೆ ಈ ವಿಚಾರ ಕುರಿತು ಸುಪ್ರೀಂ ಕೋರ್ಟ್ ಸದ್ಯ ಪರಿಗಣಿಸುವ ಅಗತ್ಯವಿಲ್ಲ ಎಂದು ಮನವಿ ಮಾಡಿದೆ.
ದೇಶದ್ರೋಹದ ಕಾನೂನಿನ ಕುರಿತು ಹಲವು ಅಭಿಪ್ರಾಯಗಳು ಹಾಗೂ ಮಾನವ ಹಕ್ಕುಗಳ ಕುರಿತಾದ ಕಾಳಜಿಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಅರಿವಿದೆ. ದೇಶದ ಏಕತೆ ಮತ್ತು ಸಾರ್ವಭೌಮತೆಯನ್ನು ರಕಿಸುವ ಬದ್ಧತೆಯ ಜತೆಗೆ ಐಪಿಸಿಯ ಸೆಕ್ಷನ್ 124 ಎ ಅನ್ನು ಪರಿಗಣಿಸಲು ಸರಕಾರ ನಿರ್ಧರಿಸಿದೆ ಇದನ್ನು ಸೂಕ್ತ ವೇದಿಕೆಯಲ್ಲಿ ಮಾತ್ರ ಮಾಡಲಾಗುವುದು ಎಂದು ಕೇಂದ್ರ ತನ್ನ ಅಫಿಡವಿಟ್ನಲ್ಲಿ ಹೇಳಿದೆ.
ದೇಶಾದ್ಯಂತ ಪೊಲೀಸರು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿರುವ ದೇಶದ್ರೋಹ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಾಗ ಕೇಂದ್ರದ ಅಫಿಡವಿಟ್ ಬಂದಿದೆ. ತನ್ನ ಪ್ರತಿಕ್ರಿಯೆ ಅಂತಿಮಗೊಳಿಸಲು ಕಳೆದ ವಾರ ಸರಕಾರ ಹೆಚ್ಚಿನ ಸಮಯಾವಕಾಶ ಕೋರಿತ್ತು.