ಜಪ್ತಿ ಮಾಡಲಾದ 5,551 ಕೋ.ರೂ. ಷರತ್ತುಬದ್ಧ ಬಳಕೆಗೆ ಶಿಯೋಮಿಗೆ ಕರ್ನಾಟಕ ಹೈಕೋರ್ಟ್ ಅವಕಾಶ
ಬೆಂಗಳೂರು,ಮೇ 12: ಚೀನಿ ಸ್ಮಾರ್ಟ್ ಫೋನ್ ಕಂಪನಿ ಶಿಯೋಮಿಯ ಬ್ಯಾಂಕ್ ಖಾತೆಗಳಲ್ಲಿರುವ 5,551.27 ಕೋ.ರೂ.ಗಳನ್ನು ಮರುಸ್ತಂಭನಗೊಳಿಸಲು ಕರ್ನಾಟಕ ಉಚ್ಚ ನ್ಯಾಯಾಲಯವು ಗುರುವಾರ ನಿರಾಕರಿಸಿದೆ.
ಹೊರದೇಶಗಳಿಗೆ ಅಕ್ರಮ ಹಣ ರವಾನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ಈ ತಿಂಗಳ ಆರಂಭದಲ್ಲಿ ಶಿಯೋಮಿಯ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಶಿಯೋಮಿ ಮೇಲ್ಮನವಿಯನ್ನು ಸಲ್ಲಿಸಿದ ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯವು ಸ್ತಂಭನಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಈ.ಡಿ.ಬಲವಂತದಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆಗಳ ಆರೋಪಗಳ ಸಲ್ಲಿಕೆ ‘ನಂತರದ ಚಿಂತನೆ ’ಯಾಗಿದೆ ಎಂದು ಶಿಯೋಮಿ ಆರೋಪಿಸಿತ್ತು. ಸ್ತಂಭನಕ್ಕೆ ತಡೆಯಾಜ್ಞೆ ನೀಡಿರುವ ಮತ್ತು ರಾಯಧನೇತರ ಪಾವತಿಗಳಿಗಾಗಿ ಖಾತೆಗಳಿಂದ ಹಣವನ್ನು ಹಿಂದೆಗೆದುಕೊಳ್ಳಲು ಶಿಯೋಮಿಗೆ ಅವಕಾಶ ನೀಡಿರುವ ತನ್ನ ಆದೇಶವು ಮುಂದುವರಿಯುತ್ತದೆ ಎಂದು ಉಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.
ಈ ವಿಷಯದಲ್ಲಿ ಇನ್ನಷ್ಟು ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ ನ್ಯಾ.ಸಿದ್ದಪ್ಪ ಸುನಿಲ ದತ್ ಯಾದವ ಅವರು ಮುಂದಿನ ವಿಚಾರಣೆಯನ್ನು ಮೇ 23ಕ್ಕೆ ನಿಗದಿಗೊಳಿಸಿದರು.
ರಾಯಧನ ಪಾವತಿಯನ್ನು ಹೊರತುಪಡಿಸಿ ಇತರ ಉದ್ದೇಶಗಳಿಗೂ ಹಣವನ್ನು ಹಿಂದೆಗೆದುಕೊಳ್ಳಲು ಬ್ಯಾಂಕುಗಳು ಅವಕಾಶ ನೀಡುತ್ತಿಲ್ಲ ಎಂದು ಶಿಯೋಮಿ ದೂರಿಕೊಂಡಾಗ,ಬ್ಯಾಂಕ್ ಓವರ್ಡ್ರಾಫ್ಟ್ ಸೌಲಭ್ಯವನ್ನು ಬಳಸಿಕೊಳ್ಳಲು ನ್ಯಾಯಾಲಯವು ಅದಕ್ಕೆ ಅನುಮತಿ ನೀಡಿತು.
ರಾಯಧನದ ಸೋಗಿನಲ್ಲಿ ಮೂರು ವಿದೇಶಿ ಕಂಪನಿಗಳಿಗೆ ಹಣವನ್ನು ರವಾನಿಸುತ್ತಿದ್ದ ಆರೋಪದಲ್ಲಿ ಶಿಯೋಮಿ ಕಳೆದ ನಾಲ್ಕು ತಿಂಗಳುಗಳಿಂದ ಈ.ಡಿ.ಯ ತನಿಖೆಗೊಳಪಟ್ಟಿದೆ.