ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಕಾಂಗ್ರೆಸ್ ನಿಂದ ಕಾಶ್ಮೀರ-ಕನ್ಯಾಕುಮಾರಿವರೆಗೆ ಪಾದಯಾತ್ರೆಗೆ ಚಿಂತನೆ
Photo: PTI
ಹೊಸದಿಲ್ಲಿ: ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿ 'ಪಾದಯಾತ್ರೆ' ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜಿಸಿದೆ. ವರ್ಷಪೂರ್ತಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಕಾಲಕಾಲಕ್ಕೆ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ನಿರುದ್ಯೋಗ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪಾದಯಾತ್ರೆ ನಡೆಸಲಿದೆ. ಉದಯಪುರದಲ್ಲಿ ಪಕ್ಷದ 'ಚಿಂತನ್ ಶಿಬಿರ’ದಲ್ಲಿ ಸೂಚಿಸಿದಂತೆ ಈ ಪ್ರಸ್ತಾಪವು 'ಜನ್ ಜಾಗರಣ ಅಭಿಯಾನ 2.0' ನ ಭಾಗವಾಗಿತ್ತು.
ನಿರಂತರ ಆಂದೋಲನ ಸಮಿತಿಯ ಅಧ್ಯಕ್ಷ ದಿಗ್ವಿಜಯ ಸಿಂಗ್ ಅವರು ಸಭೆಯಲ್ಲಿ ಈ ಪ್ರಸ್ತಾಪದ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು. ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಯುವ ಸಮಿತಿಯು ದೇಶಾದ್ಯಂತ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಇದೇ ರೀತಿಯ ಪ್ರಸ್ತಾಪವನ್ನು ಹೊಂದಿತ್ತು. ನಿರುದ್ಯೋಗ ಸಮಸ್ಯೆ ಕುರಿತು ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ ನಡೆಸಬೇಕು ಹಾಗೂ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಾಲಕಾಲಕ್ಕೆ ಭಾಗವಹಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
‘ಇಂಡಿಯಾ ಟುಡೇ’ ಟಿವಿ ಜೊತೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, “ಈ ಪ್ರಸ್ತಾಪವು ಬಹುತೇಕ ಅಂತಿಮವಾಗಿದೆ. ಕಾಂಗ್ರೆಸ್ ವತಿಯಿಂದ ದೇಶದಾದ್ಯಂತ ಯಾತ್ರೆ ನಡೆಯಲಿದೆ. ಜನತಾ ದರ್ಬಾರ್ ನಡೆಸುವ ಪ್ರಸ್ತಾವವೂ ಇದೆ. ಇದು ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಕ್ರಮವಾಗಿದೆ ಎಂದರು.