ಮಥುರಾ: ʼಕೃಷ್ಣ ಜನ್ಮಭೂಮಿʼಯಲ್ಲಿರುವ ಮಸೀದಿ ತೆರವುಗೊಳಿಸಬೇಕೆಂಬ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ
ಮಥುರಾ: ಕೃಷ್ಣ ಜನ್ಮಭೂಮಿ ಅಥವಾ ಹಿಂದೂಗಳ ಆರಾಧ್ಯ ದೇವರಾಗಿರುವ ಶ್ರೀಕೃಷ್ಣ ಜನಿಸಿದ ಸ್ಥಳದಲ್ಲಿ ಮಸೀದಿ ಕಟ್ಟಲಾಗಿದೆ, ಅದನ್ನು ತೆರವುಗೊಳಿಸಬೇಕು ಎಂಬ ಹಿಂದುತ್ವ ಸಂಘಟನೆಗಳ ಆರೋಪವನ್ನೊಳಗೊಂಡಿರುವ ಅರ್ಜಿಯನ್ನು ಇಂದು ಮಥುರಾದ ನ್ಯಾಯಾಲಯ ವಿಚಾರಣೆಗೆ ಅನುಮತಿಸಿದೆ ಎಂದು ತಿಳಿದು ಬಂದಿದೆ.
17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದುತ್ವ ಸಂಘಟನೆಗಳು ಈ ಮೊಕದ್ದಮೆಯನ್ನು ಹೂಡಿದ್ದು, ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಶಾಹಿ ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
"ಶ್ರೀಕೃಷ್ಣನ ಆರಾಧಕರಾದ ನಮಗೆ ಆತನ ಆಸ್ತಿಯನ್ನು ಮರುಸ್ಥಾಪಿಸುವಂತೆ ಕೋರಿ ಮೊಕದ್ದಮೆ ಹೂಡುವ ಹಕ್ಕಿದೆ. ಕೃಷ್ಣ ಜನ್ಮಭೂಮಿಯ ಮೇಲೆ ಮಸೀದಿಯನ್ನು ತಪ್ಪಾಗಿ ನಿರ್ಮಿಸಲಾಗಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಹಲವು ವರ್ಷಗಳ ಹಿಂದೆಯೇ ರಾಜಿ ಮಾಡಿಕೊಳ್ಳಲಾಗಿತ್ತು, ಆದರೆ ಆ ರಾಜಿ ಕಾನೂನುಬಾಹಿರವಾಗಿದೆ" ಎಂದು ಅರ್ಜಿದಾರರ ಪರ ವಕೀಲ ಗೋಪಾಲ್ ಖಂಡೇಲ್ವಾಲ್ ಹೇಳಿದ್ದಾರೆ.