ಅವರು ದಾಖಲೆಗಳನ್ನು ನಾಶ ಮಾಡಲು ಸಿದ್ಧರಾಗಿ ಬಂದಿದ್ದರು: ಅಸ್ಸಾಂ ಪೊಲೀಸರು
ಗುವಾಹತಿ, ಮೇ 22: ಅಸ್ಸಾಮಿನ ನಾಗಾಂವ್ ಜಿಲ್ಲೆಯ ಬಟಾದ್ರವದಲ್ಲಿರುವ ಪೊಲೀಸ್ ಠಾಣೆಗೆ ಗುಂಪೊಂದು ಬೆಂಕಿ ಹಚ್ಚಿದ ಎರಡು ದಿನಗಳ ಬಳಿಕ ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ದಾಖಲೆಗಳನ್ನು ನಾಶಗೊಳಿಸುವ ಉದ್ದೇಶದಿಂದ ನಡೆಸಿದ ಪೂರ್ವ ಯೋಜಿತವಾಗಿ ದಾಳಿ ಇದಾಗಿದೆ ಎಂದಿದ್ದಾರೆ.
ಬಟಾದ್ರವ ಪೊಲೀಸ್ ಠಾಣೆ ವ್ಯಾಪ್ತಿಯ ಸಲೋನಾಬರಿಯವರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಸುಮಾರು 40 ಜನರ ಗುಂಪು ಶನಿವಾರ ಪೊಲೀಸ್ ಠಾಣೆಯ ಹಳೆಯ ಕಟ್ಟಡಕ್ಕೆ ಬೆಂಕಿ ಹಚ್ಚಿತ್ತು. ಈ ಪ್ರದೇಶದ ಮೀನು ಮಾರಾಟಗಾರ ಶಫೀಕುಲ್ ಇಸ್ಲಾಮ್ ಅವರ ಪೊಲೀಸ್ ಕಸ್ಟಡಿ ಸಾವಿನ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು ರವಿವಾರ ಬೆಳಗ್ಗೆ ಇಸ್ಲಾಮ್ ಅವರ ಮನೆ ಸೇರಿದಂತೆ ಸಲೋನಾಬರಿಯಲ್ಲಿರುವ 5 ಮನೆಗಳನ್ನು ನೆಲಸಮಗೊಳಿಸಿತ್ತು.
ಇದು ಕಾನೂನು ಬಾಹಿರ ಎಂದು ಜಿಲ್ಲಾಡಳಿತ ಪ್ರತಿಪಾದಿಸಿತ್ತು. ಅಲ್ಲದೆ, ನಕಲಿ ದಾಖಲೆಗಳನ್ನು ಕೂಡ ಸೃಷ್ಟಿಸಿತ್ತು. ಧ್ವಂಸ ಕಾರ್ಯಾಚರಣೆಗಿಂತ ಮುನ್ನ ನಿವಾಸಿಗಳಿಗೆ ಸೂಚನೆ ಅಥವಾ ಪೂರ್ವಭಾವಿ ನೋಟಿಸು ನೀಡಿರಲಿಲ್ಲ. ಗುಂಪು ದಾಳಿಯ ಕುರಿತಂತೆ ಎಸ್ಐಟಿ ತನಿಖೆಗೆ ಆದೇಶ ನೀಡಲಾಗಿದೆ. ಇಸ್ಲಾಮ್ ಅವರ ಸಾವಿನ ಕುರಿತು ಪ್ರತ್ಯೇಕ ತನಿಖೆ ನಡೆಯುತ್ತಿದೆ. ಇಸ್ಲಾಮ್ ಅವರನ್ನು ಪೊಲೀಸರು ಕಾನೂನು ಬಾಹಿರವಾಗಿ ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲದೆ ಕಸ್ಟಡಿಯಲ್ಲಿ ಹಿಂಸೆ ನೀಡಿದ್ದಾರೆ. ಇದು ಅವರ ಸಾವಿಗೆ ಕಾರಣವಾಗಿದೆ ಎಂದು ಇ್ಲಾಮ್ ಅವರ ಕುಟುಂಬ ಆರೋಪಿಸಿದೆ.