ಕಾಶ್ಮೀರದಲ್ಲಿ ಯೋಜಿತ ಹತ್ಯೆಗಳನ್ನು ಖಂಡಿಸಿದ ಪ್ರಧಾನ ಮುಫ್ತಿ : ಶಾಂತಿ, ಸಹೋದರತೆ ಕಾಪಾಡುವಂತೆ ಮನವಿ
ಶ್ರೀನಗರ, ಜೂ.4: ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಯೋಜಿತ ಹತ್ಯೆಗಳು ನಡೆದಿರುವುದನ್ನು ಕಾಶ್ಮೀರದ ಪ್ರಧಾನ ಮುಫ್ತಿ ನಸೀರ್ ಉಲ್ ಇಸ್ಲಾಂ ಅವರು ಬಲವಾಗಿ ಖಂಡಿಸಿದ್ದಾರೆ. ಇಂತಹ ಹೇಯ ಅಪರಾಧಗಳ ಬಗ್ಗೆ ತನಿಖೆಯನ್ನು ನಡೆಸುವಂತೆಯೂ ಅವರು ಆಗ್ರಹಿಸಿದ್ದಾರೆ. ಪ್ರತಿಯೊಂದು ಧರ್ಮವೂ ಪ್ರತಿಯೊಬ್ಬ ಮಾನವನ ಸುರಕ್ಷತೆಯನ್ನು ಪ್ರತಿಪಾದಿಸುತ್ತಿದ್ದು, ಸಮುದಾಯಗಳ ನಡುವೆ ಭ್ರಾತೃತ್ವವನ್ನು ಕಾಪಾಡಿಕೊಳ್ಳುವಂತೆ ಜನತೆಗೆ ಅವರು ಮನವಿ ಮಾಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ ನಸೀರ್ ಉಲ್ ಇಸ್ಲಾಂ ಅವರು, ಕಾಶ್ಮೀರದಲ್ಲಿ ಮಾನವರ ರಕ್ತ ಹಾಗೂ ಮಾನವೀಯತೆ ಅತ್ಯಂತ ಅಗ್ಗವಾಗಿ ಬಿಟ್ಟಿದೆ ಎಂದವರು ವಿಷಾದಿಸಿದರು.
‘‘ಇಸ್ಲಾಂ ಸೇರಿದಂತೆ ಪ್ರತಿಯೊಂದು ಧರ್ಮವು ಪ್ರತಿಯೊಬ್ಬ ಮಾನವನ ಪ್ರಾಣದ ಸುರಕ್ಷತೆಗೆ ಮಹತ್ವವನ್ನು ನೀಡುತ್ತದೆ. ಸಮಸ್ಯೆಯೇನಾದರೂ ಇದ್ದಲ್ಲಿ ಅದನ್ನು ಬಗೆಹರಿಸಬೇಕಾಗಿದೆ. ಆದರೆ ರಕ್ತವನ್ನು ಚೆಲ್ಲುವ ಮೂಲಕ ಪರಿಹಾರವನ್ನು ಹುಡುಕುವುದು ಮಾನವತೆಗೆ ವಿರುದ್ಧವಾಗಿದೆ’’ ನಸೀರ್ ಉಲ್ ಇಸ್ಲಾಂ ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ದುಡಿಯುವ ವ್ಯಕ್ತಿಗಳ ಭದ್ರತೆಯು ಸ್ಥಳೀಯ ನಿವಾಸಿಗಳ ಹೊಣೆಗಾರಿಕೆಯಾಗಿದೆ ಎಂದವರು ಹೇಳಿದರು. ‘‘ಇಂತಹ ಯೋಜಿತ ಹತ್ಯೆಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ. ಅಪರಾಧಿಗಳ ಗುರುತುಹಿಡಿಯಬೇಕಾಗಿದೆ ಹಾಗೂ ಅವರ ದುರುದ್ದೇಶಗಳನ್ನು ಕಂಡುಹಿಡಿಯಬೇಕಾಗಿದೆ. ಬಿಹಾರಿ ಕಾರ್ಮಿಕರು ಸೇರಿದಂತೆ ಕಣಿವೆಯಲ್ಲಿ ದುಡಿಯುತ್ತಿರುವ ಸುರಕ್ಷತೆಯು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.ಸಮುದಾಯಗಳ ನಡುವೆ ಸೌಹಾರ್ದತೆ ಹಾಗೂ ಭ್ರಾತೃತ್ವವನ್ನು ಕಾಪಾಡುವ ಅಗತ್ಯವನ್ನು ಅವರು ಸಂದರ್ಭದಲ್ಲಿ ಒತ್ತಿ ಹೇಳಿದರು.
ಕಾಶ್ಮೀರಿ ಪಂಡಿತರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮುಫ್ತಿಯವರು, ಅವರು ಹೊರಹೋಗಕೂಡದು ಹಾಗೂ ಕಣಿವೆಯಲ್ಲಿ ಉಳಿದುಕೊಳ್ಳುವಂತೆ ಮನವಿ ಮಾಡಿದರು. ‘‘ಕಾಶ್ಮೀರಿ ಪಂಡಿತರ ವಾಪಸಾತಿಗಾಗಿ ನಾವು ಕಳೆದ 30 ವರ್ಷಗಳಿಂದ ಗೋಗರೆಯುತ್ತಲೇ ಇದ್ದೆವು. ಇದೀಗ ಅವರು ವಾಪಸ್ ಬಂದಿದ್ದಾರೆ ಹಾಗೂ ಅವರು ನಮ್ಮಾಂದಿಗೆ ಶಾಂತಿ ಹಾಗೂ ಘನತೆಯೊಂದಿಗೆ ಉಳಿದುಕೊಳ್ಳಬೇಕಾಗಿದೆ’’ ಎಂದು ತಿಳಿಸಿದರು.
‘‘ಕಾಶ್ಮೀರ ಕಣಿವೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿರುವುದು ನನಗೆ ಕಾಣುತ್ತಿಲ್ಲ. ಪ್ರವಾಸಿಗರು ಮರಳುತ್ತಿದ್ದಾರೆ ಹಾಗೂ ಒಂದು ಹಂತಕ್ಕೆ ಕಾಶ್ಮೀರದಲ್ಲಿ ಸಹಜತೆ ಮರಳಿದೆ. ಆದರೆ ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ಹಾಗೂ ಪ್ರಗತಿಯನ್ನು ನಾವು ಕಾಣಬಯಸುತ್ತಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ ’’ಎಂದು ನಾಸೀರುಲ್ ಇಸ್ಲಾಂ ಆತಂಕ ವ್ಯಕ್ತಪಡಿಸಿದರು.