ಉತ್ತರಾಖಂಡದಲ್ಲಿ ಕಮರಿಗೆ ಬಿದ್ದ ಬಸ್: ಸಾವಿನ ಸಂಖ್ಯೆ 26ಕ್ಕೆ ಏರಿಕೆ
Photo:PTI
ಉತ್ತರಕಾಶಿ: ತಡರಾತ್ರಿ ರಕ್ಷಣಾ ಕಾರ್ಯಾಚರಣೆ ಬಳಿಕ ಉತ್ತರಕಾಶಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಅಧಿಕಾರಿಗಳ ಪ್ರಕಾರ, ಮಧ್ಯಪ್ರದೇಶದ 25 ಯಾತ್ರಿಕರ ಮೃತದೇಹಗಳನ್ನು ಜಾಲಿಗ್ರಾಂಟ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಉತ್ತರಾಖಂಡದ ಅಲ್ಮೋರಾ ನಿವಾಸಿ ಬಸ್ ಕಂಡಕ್ಟರ್ ವಿಕ್ರಮ್ ಬೋರಾ ಅವರ ಮೃತದೇಹವನ್ನು ನೌಗಾನ್ನ ಸಿಎಚ್ಸಿಯಲ್ಲಿ ಇರಿಸಲಾಗಿದೆ.
ಮತ್ತೊಂದೆಡೆ, ಗಾಯಗೊಂಡ ನಾಲ್ವರನ್ನು ಮ್ಯಾಕ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಮಧ್ಯಪ್ರದೇಶದ ಪನ್ನಾದಿಂದ 28 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ರವಿವಾರ ಸಂಜೆ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಮ್ಟಾ ಬಳಿ 250 ಮೀಟರ್ ಆಳದ ಕಮರಿಗೆ ಬಿದ್ದಿದೆ.
ಈ ಮಧ್ಯೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಧಾಮಿ, ಚೌಹಾಣ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದರು
ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಉತ್ತರಕಾಶಿ ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.