ಜಮ್ಮುಕಾಶ್ಮೀರ: ದೇವಾಲಯದಲ್ಲಿ ದಾಂಧಲೆ
ಜಮ್ಮು, ಜೂ. 6: ಜಮ್ಮು ಹಾಗೂ ಕಾಶ್ಮೀರದ ಕೆಲವು ಭಾಗಗಳಲ್ಲಿ ಸೋಮವಾರ ಪ್ರತಿಭಟನೆ ಉದ್ಭವಿಸಲು ಕಾರಣವಾದ ಇಲ್ಲಿನ ದೋಡಾ ಜಿಲ್ಲೆಯ ದೇವಾಲಯದಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದೂರು ದಾಖಲಿಸಿದ್ದಾರೆ.
17,400 ಅಡಿ ಎತ್ತರದ ಕೈಲಾಸ್ ಕುಂಡ್ನಲ್ಲಿ ಇರುವ ವಾಸುಕಿ ನಾಗ ದೇವಾಲಯದಲ್ಲಿ ದಾಂಧಲೆ ನಡೆಸಿದ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವಾಸ್ತವವನ್ನು ಖಚಿತಪಡಿಸಕೊಳ್ಳಲು ಈ ಪ್ರದೇಶದಲ್ಲಿ ಈಗಾಗಲೇ ಪೊಲೀಸರ ತಂಡವೊಂದನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂಪೂರ್ಣ ತನಿಖೆ ನಡೆಸಲು ಭದೇರ್ವಾಹ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ಭಾಗಗಳಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.