ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಸಹಿತ 63 ಮಂದಿಗೆ ಕ್ಲೀನ್ ಚಿಟ್: ʼಸತ್ಯಮೇವ ಜಯತೇʼ ಎಂದ ಬಿಜೆಪಿ
PHOTO: PTI
ಹೊಸದಿಲ್ಲಿ,ಜೂ.24: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ 63 ಮಂದಿಗೆ ಸಿಟ್ ಕ್ಲೀನ್ಚಿಟ್ ನೀಡಿರುವುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದಕ್ಕೆ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದು, ‘ಸತ್ಯಮೇವ ಜಯತೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ‘‘ ಸತ್ಯಮೇವ ಜಯತೆ!. ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದೆ ಹಾಗೂ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೇಮಕ ಮಾಡಿದ ವಿಶೇಷ ತನಿಖಾ ತಂಡದ ವರದಿಯನ್ನು ಪ್ರಶ್ನಿಸಿದ ಝಕಿಯಾ ಜಾಫ್ರಿ ಅವರ ಅರ್ಜಿಯನ್ನು ವಿಶೇಷ ತನಿಖಾ ತಂಡ ತಳ್ಳಿಹಾಕಿದೆ.ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ’’ ಎಂದು ಟ್ವೀಟಿಸಿದ್ದಾರೆ.
ಇನ್ನೋರ್ವ ಕೇಂದ್ರ ಸಚಿವೆ ಸ್ಮತಿ ಇರಾನಿ ಹಾಗೂ ಪಕ್ಷದ ವಕ್ತಾ ರ ಸಂಬಿತ್ ಪಾತ್ರಾ ಕೂಡಾ ಸತ್ಯಮೇವ ಜಯತೇ ಎಂದು ಟ್ವೀಟ್ ಮಾಡಿ, ಸುಪ್ರೀಂಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘‘ಪ್ರಧಾನಿ ಮೋದಿಯವರಿಗೆ ಕಳಂಕ ಹಚ್ಚುವ ಕಾಂಗ್ರೆಸ್ನ ಕೊನೆಯ ಪ್ರಯತ್ನ ಕೂಡಾ ವಿಫಲವಾಗಿದೆ ಹಾಗೂ ನ್ಯಾಯಕ್ಕೆ ಜಯದೊರೆತಿದೆ ’’ಎಂದು ಬಿಜೆಪಿ ಕಾರ್ಯದರ್ಶಿ ವೈ. ಸತ್ಯಕುಮಾರ್ ಪ್ರತಿಕ್ರಿಯಿಸಿದ್ದಾರೆ.