ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಚುನಾವಣೆ ಎದುರಿಸಿ: ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಬಹಿರಂಗ ಸವಾಲು
Photo:twitter
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಂಡಾಯ ಶಾಸಕರಿಗೆ ಪಕ್ಷ ತೊರೆದು ಚುನಾವಣೆ ಎದುರಿಸುವಂತೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ಬಂಡಾಯ ಸುಮಾರು ಒಂದು ವಾರದವರೆಗೆ ಮುಂದುವರಿದಂತೆ ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ತಮ್ಮ ಪಕ್ಷದ ಶಾಸಕರಿಗೆ ಬಹಿರಂಗ ಸವಾಲು ಹಾಕಿರುವ ಠಾಕ್ರೆ "ಪಕ್ಷಾಂತರ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ’’ ಎಂದು ಹೇಳಿದ್ದಾರೆ.
"ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ. ನಾವು ಮಾಡಿದ್ದು ತಪ್ಪು, ಉದ್ಧವ್ (ಠಾಕ್ರೆ) ಅವರ ನಾಯಕತ್ವದಲ್ಲಿ ತಪ್ಪು ಹಾಗೂ ನಾವೆಲ್ಲರೂ ತಪ್ಪು ಎಂದು ನೀವು ಭಾವಿಸಿದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ನಾವು ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.
ರಾಜ್ಯದ ರಾಜಕೀಯ ಬಿಕ್ಕಟ್ಟನ್ನು ಸತ್ಯ ಮತ್ತು ಸುಳ್ಳಿನ ನಡುವಿನ ಯುದ್ಧ ಎಂದು ಕರೆದಿರುವ ಆದಿತ್ಯ ಠಾಕ್ರೆ ಶಿವಸೇನೆಯ ಬಂಡಾಯ ಶಾಸಕರು ಮಾಡಿದ ದ್ರೋಹವನ್ನು ನಾವು ಮರೆಯುವುದಿಲ್ಲ ನಾವು (ಶಿವಸೇನೆ) ಗೆಲ್ಲುವುದು ಖಚಿತ ಎಂದರು.