ಸೆಟಲ್ವಾಡ್, ಶ್ರೀಕುಮಾರ್ ಬಂಧನದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದು ಯಾಕೆ?: ಪಿಣರಾಯಿ ವಿಜಯನ್ ಪ್ರಶ್ನೆ
ಹೊಸದಿಲ್ಲಿ, ಜೂ. 27: ಗುಜರಾತ್ ಗಲಭೆ ಕುರಿತಂತೆ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂನ ಪಾಲಿಟ್ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಜರಾತ್ ಗಲಭೆಯಲ್ಲಿ ಆಗಿನ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರಕಾರಕ್ಕೆ ಎಸ್ಐಟಿ ಕ್ಲೀನ್ ಚಿಟ್ ನೀಡಿರು ವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಮರುದಿನವೇ ಗುಜರಾತ್ ಪೊಲೀಸರು ನಿವೃತ್ತ ಡಿಜಿಪಿ ಆರ್.ಬಿ. ಶ್ರೀಕುಮಾರ್ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿರುವ ವಿಷಯದಲ್ಲಿ ಕಾಂಗ್ರೆಸ್ನ ಮೌನವನ್ನು ಅವರು ಪ್ರಶ್ನಿಸಿದ್ದಾರೆ.
‘‘ತೀಸ್ತಾ, ಶ್ರೀಕುಮಾರ್ ಬಂಧನದ ವಿರುದ್ಧ ಕಾಂಗ್ರೆಸ್, ಬೃಹತ್ ಅಲ್ಲದಿದ್ದರೂ ಕನಿಷ್ಠ ಪಕ್ಷ ಸಾಂಕೇತಿಕ ಪ್ರತಿಭಟನೆಯನ್ನಾದರೂ ಆಯೋಜಿಸಬಹುದಿತ್ತು. ಅವರು ಯಾಕೆ ಹಾಗೆ ಯೋಚಿಸಲಿಲ್ಲ? ಅವರನ್ನು (ಸೆಟಲ್ವಾಡ್, ಶ್ರೀಕುಮಾರ್) ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದ ದಿನದಂದೇ ಬಂಧಿಸಲಾ ಯಿತು. ಈ ಬಂಧನವು ದೇಶದಲ್ಲಿರುವ ಬಿಜೆಪಿ ವಿರೋಧಿ ಶಕ್ತಿಗಳನ್ನು ಭಯಭೀತಗೊಳಿಸುವ ಪ್ರಯತ್ನವಾಗಿದೆ. ನೀವು ಸಂಘ ಪರಿವಾರದ ಬಗ್ಗೆ ಮಾತನಾಡಿದರೆ, ಉಂಟಾಗುವ ಪರಿಣಾಮ ಇದಾಗಿದೆ’’ ಎಂದು ಅವರು ಹೇಳಿದ್ದಾರೆ.
ಸಂಘ ಪರಿವಾರದ ಬೆದರಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೌನ ವಹಿಸಿದೆ. ಬಿಜೆಪಿಗೆ ಹೆದರಿ ಕಾಂಗ್ರೆಸ್ ಮಂಡಿಯೂರಿದೆ. ಇಂಡಿಯನ್ ಮುಸ್ಲಿಮ್
ಲೀಗ್ ಸೇರಿದಂತೆ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿರುವ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ತಿಳಿಸಿದ್ದಾರೆ.
‘‘2002ರ ಗುಜರಾತ್ ಗಲಭೆಯಲ್ಲಿ ಹತ್ಯೆ ಯಾದ ಕಾಂಗ್ರೆಸ್ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಯವರ ಪತ್ನಿ ಝಕಿಯಾ ಜಾಫ್ರಿ ಅವರ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತೇ? ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ನ ಇತರ ನಾಯಕರು ಅವರನ್ನು ಭೇಟಿಯಾಗಿದ್ದರೇ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಆಗಿನ ಕಾಂಗ್ರೆಸ್ ನಾಯಕರು ಝಕಿಯಾ ಅವರನ್ನು ಭೇಟಿಯಾಗದಂತೆ ಸೋನಿಯಾ ಗಾಂಧಿ ಅವರಿಗೆ ಸಲಹೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಹಿಂದೂಗಳ ಮತ ಕಳೆದುಕೊಳ್ಳಬಹುದು ಎಂಬ ಭಯ ಕಾರಣ ವಾಗಿತ್ತು. ಕಳೆದ ಗುಜರಾತ್ ವಿಧಾನ ಸಭೆ ಚುನಾವಣೆಯ ಸಂದರ್ಭ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ದೇವಾಲಯಗಳಿಗೆ ಓಡಾಡಿದ್ದರು. ಆದರೆ, ಆಗ ಅವರು ಜಾಫ್ರಿ ಅಥವಾ ಗಲಭೆಯ ಬಗ್ಗೆ ಮಾತನಾಡಿರಲಿಲ್ಲ’’ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.