ದಿಲ್ಲಿ ಸಚಿವ ಮನೀಶ್ ಸಿಸೋಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ
Photo:PTI
ಹೊಸದಿಲ್ಲಿ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಈ ಹಿಂದಿನ ಅಸ್ಸಾಂ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಕೋವಿಡ್ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆಸಿದ್ದಾರೆ. ಶರ್ಮಾ ಅವರು ತಮ್ಮ ಪತ್ನಿಗೆ ಸಂಪರ್ಕ ಹೊಂದಿದ್ದ ಕಂಪನಿಗೆ ಪಿಪಿಇ ಕಿಟ್ಗಳ ಗುತ್ತಿಗೆಯನ್ನು ನೀಡಿದ್ದಾರೆ ಹಾಗೂ ಕಿಟ್ ಗಳಿಗೆ ಹೆಚ್ಚು ಹಣ ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಈಗಾಗಲೇ ದಿಲ್ಲಿ ಸಚಿವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
"ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪತ್ನಿಯ ಕಂಪನಿಗೆ ಗುತ್ತಿಗೆ ನೀಡಿದರು. ಅವರು ಪಿಪಿಇ ಕಿಟ್ಗಳಿಗಾಗಿ 990 ರೂ. ಪಾವತಿಸಿದರು ಹಾಗೂ ಇತರರು ಅದೇ ದಿನ ಮತ್ತೊಂದು ಕಂಪನಿಯಿಂದ 600 ರೂ. ಕ್ಕೆ ಖರೀದಿಸಿದರು. ಇದು ದೊಡ್ಡ ಅಪರಾಧವಾಗಿದೆ" ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಇದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿವೆ ಎಂದೂ ಸಿಸೋಡಿಯಾ ಹೇಳಿಕೊಂಡಿದ್ದರು.