ಅಗ್ನಿಪಥ್ ಯೋಜನೆ: 2019ರ ಅಧಿಸೂಚನೆ ಪ್ರಕಾರ ದಾಖಲಾತಿ ಕೋರಿ ಹೈಕೋರ್ಟ್ ಮೊರೆ ಹೋದ ಐಎಎಫ್ ಅಭ್ಯರ್ಥಿಗಳು
Photo:PTI
ಹೊಸದಿಲ್ಲಿ: ಕೇಂದ್ರದ ಹೊಸ ಅಗ್ನಿಪಥ್ ನೇಮಕಾತಿ ಯೋಜನೆಯಿಂದ ಪ್ರಭಾವಿತವಾಗದೆ 2019 ರ ಅಧಿಸೂಚನೆಯ ಪ್ರಕಾರ ಹಿಂದಿನ ನೇಮಕಾತಿ ಪೂರ್ಣಗೊಳಿಸಲು ಹಾಗೂ ದಾಖಲಾತಿ ಪಟ್ಟಿಯನ್ನು ನೀಡುವಂತೆ ಕೋರಿ ಭಾರತೀಯ ವಾಯುಪಡೆಯಲ್ಲಿ ಏರ್ಮೆನ್ಗಳಾಗಿ ಶಾರ್ಟ್ಲಿಸ್ಟ್ ಮಾಡಲಾದ ವಿವಿಧ ಅಭ್ಯರ್ಥಿಗಳು ದಿಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಂದಿನ ವಾರ ಸುಪ್ರೀಂ ಕೋರ್ಟ್ನಲ್ಲಿ ಇದೇ ರೀತಿಯ ಪ್ರಕರಣದ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಹಾಗೂ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಗಳವಾರ ಅರ್ಜಿಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಭಾರತೀಯ ವಾಯುಸೇನೆಯಲ್ಲಿ ಏರ್ಮೆನ್ಗಳಾಗಿ ಸೇರಲು ಕಾಯುತ್ತಿರುವ 20 ಅಭ್ಯರ್ಥಿಗಳು ವಕೀಲ ಪ್ರಶಾಂತ್ ಭೂಷಣ್ ಮೂಲಕ ಮನವಿಯನ್ನು ಸಲ್ಲಿಸಿದ್ದಾರೆ.
2019 ರ ಅಧಿಸೂಚನೆಯ ಪ್ರಕಾರ ದಾಖಲಾತಿ ಪಟ್ಟಿಯನ್ನು ಪ್ರಕಟಿಸಲು ಹಾಗೂ ಅದರ ಪರಿಣಾಮವಾಗಿ ಅರ್ಜಿದಾರರಿಗೆ ನೇಮಕಾತಿ ಪತ್ರಗಳನ್ನು ನೀಡಲು ಕೇಂದ್ರಕ್ಕೆ ನಿರ್ದೇಶನವನ್ನು ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.