ಇಬ್ಬರು ಕೇಂದ್ರ ಸಚಿವರ ರಾಜೀನಾಮೆ; ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಹೊಣೆ
ಹೊಸದಿಲ್ಲಿ: ರಾಜ್ಯಸಭಾ ಸದಸ್ಯತ್ವ ಪೂರ್ಣಗೊಳ್ಳುವ ಮುನ್ನಾ ದಿನ ಮುಖ್ತರ್ ಅಬ್ಬಾಸ್ ನಕ್ವಿ ಮತ್ತು ಆರ್ಸಿಪಿ ಸಿಂಗ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಖಾತೆಗಳನ್ನು ಸ್ಮೃತಿ ಇರಾನಿ ಮತ್ತು ಜ್ಯೋತಿ ರಾದಿತ್ಯ ಸಿಂಧಿಯಾ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.
ಉಭಯ ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ಸಲ್ಲಿಸಿದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಭಯ ಸಚಿವರ ರಾಜೀನಾಮೆಯನ್ನು ಸ್ವೀಕರಿಸಿದ್ದು, ನಕ್ವಿ ನಿರ್ವಹಿಸುತ್ತಿದ್ದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿಯವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಅಂತೆಯೇ ಸಿಂಗ್ ಅವರ ಉಕ್ಕು ಖಾತೆ, ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿ ರಾದಿತ್ಯ ಸಿಂಧಿಯಾ ಅವರಿಗೆ ಸಿಕ್ಕಿದೆ.
ಗುರುವಾರ ನಕ್ವಿ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಮುಕ್ತಾಯವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ಬುಧವಾರವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರೊಂದಿಗೆ ಕೇಂದ್ರ ಸಂಪುಟ ಅಥವಾ ಬಿಜೆಪಿ ಸಂಸದರಲ್ಲಿ ಯಾವ ಮುಸ್ಲಿಂ ಮುಖವೂ ಇಲ್ಲದಂತಾಗಿದೆ. ಬಿಜೆಪಿ ಸಂಸತ್ತಿನಲ್ಲಿ ಒಟ್ಟು 395 ಸದಸ್ಯರನ್ನು ಹೊಂದಿದೆ.
ಪಕ್ಷದ ಕೋಟಾದಿಂದ ಕೇಂದ್ರ ಸಚಿವ ಸಂಪುಟಕ್ಕೆ ಒಂದು ವರ್ಷದ ಹಿಂದೆ ಸೇರ್ಪಡೆಯಾಗಿದ್ದ ಮಾಜಿ ಉನ್ನತಾಧಿಕಾರಿ ಆರ್ಸಿಪಿ ಸಿಂಗ್ ತಮ್ಮ ಹುಟ್ಟುಹಬ್ಬದಂದು (ಬುಧವಾರ) ರಾಜೀನಾಮೆ ಸಲ್ಲಿಸಿದರು.