ಹೈದರಾಬಾದ್ ಪೊಲೀಸರ ನೋಟಿಸ್ ವಿರುದ್ಧ ಸಾಯಿ ಪಲ್ಲವಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಪ್ರಕರಣ ದಾಖಲಿಸಿದ್ದ ಬಜರಂಗದಳ ಕಾರ್ಯಕರ್ತ
Photo: Twitter
ಹೈದರಾಬಾದ್ : ದಿ ಕಾಶ್ಮೀರ್ ಫೈಲ್ಸ್ ಕುರಿತಂತೆ ತಾವು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲಿಸರು ನೀಡಿರುವ ನೋಟಿಸ್ ಅನ್ನು ಬದಿಗೆ ಸರಿಸಬೇಕೆಂದು ಕೋರಿ ನಟಿ ಸಾಯಿ ಪಲ್ಲವಿ ಸಲ್ಲಿಸಿದ್ದ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ವಜಾಗೊಳಿಸಿದೆ.
ಪೊಲೀಸರು ಸಲ್ಲಿಸಿದ್ದ ನೋಟಿಸ್ ಅಕ್ರಮ, ಅನ್ಯಾಯದಿಂದ ಕೂಡಿದೆ ಹಾಗೂ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಾಯಿ ಪಲ್ಲವಿ ತಮ್ಮ ಅರ್ಜಿಯಲ್ಲಿ ಹೇಳಿದ್ದರಲ್ಲದೆ ತಮ್ಮ ಹೇಳಿಕೆಯಿಂದ ದೂರುದಾರರ ಭಾವನೆಗಳಿಗೆ ಹೇಗೆ ನೋವುಂಟಾಗಿದೆ ಎಂದು ನೋಟಿಸ್ ವಿವರಿಸಿಲ್ಲ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಸಾಯಿ ಪಲ್ಲವಿ ಅವರು ಗೋರಕ್ಷಕರನ್ನು ಕಾಶ್ಮೀರಿ ಉಗ್ರರಿಗೆ ಹೋಲಿಸಿದ್ದಾರೆಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರೊಬ್ಬರು ಆಕೆಯ ವಿರುದ್ಧ ದೂರು ದಾಖಲಿಸಿದ್ದರು.
ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾದ ಉಗ್ರವಾದ ಹಾಗೂ ಗೋಕಳ್ಳಸಾಗಾಟಗಾರರು ಎಂಬ ಶಂಕೆಯಲ್ಲಿ ನಡೆಯುವ ಹಲ್ಲೆಗಳೂ ತಪ್ಪು ಎಂದು ಅವರು ಹೇಳಿದ್ದರು. ಇತ್ತೀಚೆಗೆ ಗೋಸಾಗಣಿಕೆದಾರನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆತನ ಹತ್ಯೆ ನಡೆದ ಘಟನೆಯನ್ನು ಉಲ್ಲೇಖಿಸಿದ್ದ ಆಕೆ ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಈ ಘಟನೆಗೂ ಏನು ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದ್ದರು.
ನಂತರ ಸ್ಪಷ್ಟೀಕರಣ ನೀಡಿದ್ದ ಆಕೆ ತಾನು ಯಾವುದೇ ರೀತಿಯ ಹಿಂಸೆ ತಪ್ಪು ಎಂದಷ್ಟೇ ಹೇಳಿದ್ದೆ ಎಂದಿದ್ದರು.