ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ "ಅಕ್ರಮ ಬಾರ್'' ನಡೆಸುತ್ತಿದ್ದಾರೆ: ಕಾಂಗ್ರೆಸ್ ಆರೋಪ
ಇರಾನಿಯವರನ್ನು ವಜಾಗೊಳಿಸುವಂತೆ ಪ್ರಧಾನಿಗೆ ಒತ್ತಾಯ
Photo:PTI
ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ 'ಅಕ್ರಮ ಬಾರ್' ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.
ಈ ಆರೋಪಗಳನ್ನು "ಆಧಾರ ರಹಿತ" ಎಂದು ಬಣ್ಣಿಸಿದ ಸ್ಮೃತಿ ಇರಾನಿ ಅವರ ಪುತ್ರಿ ಕಿರಾತ್ ನಾಗ್ರಾ ಅವರ ವಕೀಲರು, ತಮ್ಮ ಕಕ್ಷಿದಾರರು ಸಿಲ್ಲಿ ಸೌಲ್ಸ್ ಗೋವಾ ಎಂಬ ರೆಸ್ಟೋರೆಂಟ್ ಮಾಲಿಕರಲ್ಲ ಅಥವಾ ಅದನ್ನು ನಿರ್ವಹಿಸುತ್ತಿಲ್ಲ ಹಾಗೂ ಯಾವುದೇ ಪ್ರಾಧಿಕಾರದಿಂದ ಯಾವುದೇ ಶೋಕಾಸ್ ನೋಟಿಸ್ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.
ಇದೊಂದು "ಬಹಳ ಗಂಭೀರ ವಿಷಯ" ಎಂದು ಹೇಳಿರುವ ಕಾಂಗ್ರೆಸ್, ಬಾರ್ಗೆ ನೀಡಲಾದ ಶೋಕಾಸ್ ನೋಟಿಸ್ನ ಪ್ರತಿಯನ್ನು ಸಹ ಹಂಚಿಕೊಂಡಿದೆ ಹಾಗೂ ನೋಟಿಸ್ ನೀಡಿದ ಅಬಕಾರಿ ಅಧಿಕಾರಿಯನ್ನು ಅಧಿಕಾರಿಗಳ ಒತ್ತಡದ ನಂತರ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸುದ್ದಿಗಾರರೊಂದಿಗೆ ಮಾತನಾಡಿ, "ಇರಾನಿ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ ಹಾಗೂ ಅವರ ಮಗಳು ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ, ಆ ಬಾರ್ "ನಕಲಿ ಪರವಾನಗಿ" ಯಲ್ಲಿ ಕಾರ್ಯನಿರ್ವಹಿಸುತ್ತಿದೆ'' ಎಂದರು.
"ಸ್ಮೃತಿ ಇರಾನಿ ಅವರ ಮಗಳ ಬಳಿ ಇರುವ ಪರವಾನಗಿಯು ಮೇ 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿದೆ ಹಾಗೂ 2022 ರ ಜೂನ್ನಲ್ಲಿ ಗೋವಾದಲ್ಲಿ ಪರವಾನಗಿ ತೆಗೆದುಕೊಳ್ಳಲಾಗಿದೆ. ಆದರೆ ಪರವಾನಗಿ ಹೊಂದಿರುವ ವ್ಯಕ್ತಿ 13 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇದು ಕಾನೂನುಬಾಹಿರವಾಗಿದೆ’’ ಎಂದು ಖೇರಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಗೋವಾ ನಿಯಮಗಳ ಪ್ರಕಾರ ಒಂದು ರೆಸ್ಟೊರೆಂಟ್ಗೆ ಕೇವಲ ಒಂದು ಬಾರ್ ಲೈಸೆನ್ಸ್ ಮಾತ್ರ ಸಿಗುತ್ತದೆ. ಆದರೆ ಈ ರೆಸ್ಟೋರೆಂಟ್ಗೆ ಎರಡು ಬಾರ್ ಲೈಸೆನ್ಸ್ ನೀಡಲಾಗಿದೆ. ಸ್ಮೃತಿ ಇರಾನಿ ಅವರನ್ನು ಕೂಡಲೇ ಕೇಂದ್ರ ಸಂಪುಟದಿಂದ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ನಾವು ಪ್ರಧಾನಿಯನ್ನು ಒತ್ತಾಯಿಸುತ್ತೇವೆ. ನೀವು ಈ ದೇಶಕ್ಕೆ, ಈ ದೇಶದ ಯುವಕರಿಗೆ ಋಣಿಯಾಗಿದ್ದೀರಿ”ಎಂದು ಅವರು ಹೇಳಿದರು.