ಸಿಬಿಐ, ಈ.ಡಿ.ಕೇಂದ್ರದ ಒತ್ತಡದಡಿ ಕೆಲಸ ಮಾಡುತ್ತಿವೆ: ರಾಜಸ್ಥಾನ ಸಿಎಂ
Photo: Twitter/ashokgehlot51
ಜೈಪುರ,ಆ.1: ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ.)ದಂತಹ ತನಿಖಾ ಸಂಸ್ಥೆಗಳು ಕೇಂದ್ರದ ಒತ್ತಡದಡಿ ಕೆಲಸ ಮಾಡುತ್ತಿವೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಆರೋಪಿಸಿದ್ದಾರೆ.
ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿಬಿಐ, ಈ.ಡಿ. ಮತ್ತು ಆದಾಯ ತೆರಿಗೆ ಇಲಾಖೆ ನಿಷ್ಪಕ್ಷವಾಗಿ ಕೆಲಸ ಮಾಡುತ್ತಿದ್ದರೆ ಯಾರೂ ದೂರುತ್ತಿರಲಿಲ್ಲ. ಇಂದು ಅವು ಕೇಂದ್ರದ ಒತ್ತಡದಡಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸುವ ಮತ್ತು ಆಸ್ತಿಗಳನ್ನು ಜಪ್ತಿ ಮಾಡುವ ಈ.ಡಿ.ಅಧಿಕಾರವು ಕಾನೂನಿಗೆ ಅನುಗುಣವಾಗಿದೆ ಎಂದು ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಎತ್ತಿಹಿಡಿದಿದೆ. ಆದಾಗ್ಯೂ ಅದು ನಿರಾಶಾದಾಯಕವಾಗಿದೆ ಎಂದರು.
‘ಸಿಬಿಐ,ಈ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ರೀತಿಯನ್ನು ನಾವು ಆಕ್ಷೇಪಿಸುತ್ತೇವೆ. ನಾವು ಮಾತ್ರವಲ್ಲ,ಲಕ್ಷಾಂತರ ನಾಗರಿಕರೂ ಅದನ್ನು ಆಕ್ಷೇಪಿಸುತ್ತಿದ್ದಾರೆ ಎಂದು ಹೇಳಿದ ಗೆಹ್ಲೋಟ್, ಸಂವಿಧಾನಕ್ಕೆ ಅನುಗುಣವಾಗಿ ದೇಶದಲ್ಲಿ ಕಾನೂನಿನ ಆಡಳಿತವಿರಬೇಕು ಎಂದರು.