ನೂಪುರ್ ಶರ್ಮಾ ವಿರುದ್ಧದ ಎಲ್ಲಾ ಪ್ರಕರಣಗಳನ್ನು ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಲು ಸೂಚಿಸಿದ ಸುಪ್ರೀಂ ಕೋರ್ಟ್
ನೂಪುರ್ ಶರ್ಮಾ (PTI)
ಹೊಸದಿಲ್ಲಿ,ಆ.10: ತನ್ನ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ದಿಲ್ಲಿಗೆ ವರ್ಗಾಯಿಸುವಂತೆ ಬಿಜೆಪಿ ನಾಯಕಿ ನೂಪುರ ಶರ್ಮಾ ಮಾಡಿಕೊಂಡಿದ್ದ ಮನವಿಗೆ ಸರ್ವೋಚ್ಚ ನ್ಯಾಯಾಲಯವು ಅಸ್ತು ಎಂದಿದೆ.
ಪ್ರವಾದಿ ಮುಹಮ್ಮದ್ರ ಕುರಿತು ಶರ್ಮಾರ ನಿಂದನಾತ್ಮಕ ಹೇಳಿಕೆಗಳು ಭಾರತದಲ್ಲಿ ಭಾರೀ ಪ್ರತಿಭಟನೆ ಮತ್ತು ಕೊಲ್ಲಿ ದೇಶಗಳಿಂದ ಸರಣಿ ಅಧಿಕೃತ ದೂರುಗಳಿಗೆ ಕಾರಣವಾದ ಬಳಿಕ ಬಿಜೆಪಿ ಅವರನ್ನು ಪಕ್ಷದ ವಕ್ತಾರರ ಹುದ್ದೆಯಿಂದ ಅಮಾನತುಗೊಳಿಸಿತ್ತು.
ಪ್ರವಾದಿಯವರ ವಿರುದ್ಧ ಹೇಳಿಕೆಗಾಗಿ ಶರ್ಮಾ ವಿರುದ್ಧ ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಪ.ಬಂಗಾಳ,ಕರ್ನಾಟಕ,ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಅಸ್ಸಾಮ್ಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ.ಶರ್ಮಾಗೆ ಜೀವ ಬೆದರಿಕೆಯಿರುವುದನ್ನು ತಾನು ಪರಿಗಣಿಸಿದ್ದೇನೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.
ಜು.1ರಂದು ನಡೆದಿದ್ದ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ಪೀಠವು, ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿಯವರ ವಿರುದ್ಧ ಹೇಳಿಕೆಯ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರಕ್ಕೆ ಶರ್ಮಾ ಏಕೈಕ ಹೊಣೆಗಾರರಾಗಿದ್ದಾರೆ ಎಂದು ಎತ್ತಿಹಿಡಿದಿತ್ತು.