ರಾಹುಲ್ ಕಚೇರಿಯಲ್ಲಿದ್ದ ಮಹಾತ್ಮಾ ಗಾಂಧಿ ಚಿತ್ರ ಹಾನಿಗೊಳಿಸಿದ ಆರೋಪ: ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಸೆರೆ
Twitter video screengrab
ಕಲ್ಪೆಟ್ಟಾ: ವಯನಾಡ್ ನಲ್ಲಿನ ರಾಹುಲ್ ಗಾಂಧಿಯವರ(Rahul Gandhi) ಕಚೇರಿಯಲ್ಲಿದ್ದ ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಹಾನಿಗೊಳಿಸಿದ ಆರೋಪದ ಮೇಲೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು indianexpress.com ವರದಿ ಮಾಡಿದೆ. ಪ್ರಕರಣವು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಜೂನ್ 24 ರಂದು ಸಿಪಿಎಂ ವಿದ್ಯಾರ್ಥಿ ಘಟಕ ಎಸ್ಎಫ್ಐ(SFI) ಸದಸ್ಯರು ವಯನಾಡಿನಲ್ಲಿರುವ ರಾಹುಲ್ ಗಾಂಧಿಯವರ ಕಚೇರಿಯನ್ನು ಧ್ವಂಸಗೊಳಿಸಿದ ಸಂದರ್ಭ ನಡೆದ ಘಟನೆ ಇದಾಗಿದೆ. ಘರ್ಷಣೆಯ ಸಮಯದಲ್ಲಿ, ಮಹಾತ್ಮ ಗಾಂಧಿಯವರ(Mahathma Gandhi) ಭಾವಚಿತ್ರವನ್ನು ಕಚೇರಿಯ ಗೋಡೆಯಿಂದ ಕೆಳಗೆ ಎಳೆದು ಹಾನಿಗೊಳಿಸಿದ್ದು ಕಂಡುಬಂದಿತ್ತು. ಎಸ್ಎಫ್ಐ ಕಾರ್ಯಕರ್ತರು ಭಾವಚಿತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಸಿಪಿಎಂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದೆ.
ಬಂಧಿತ ಕಾಂಗ್ರೆಸ್ ಸದಸ್ಯರನ್ನು ವಿ. ನೌಶಾದ್, ಕೆ.ಎ ಮುಜೀಬ್, ಎಸ್.ಆರ್ ರಾಹುಲ್ ಮತ್ತು ಕೆ.ಆರ್ ರತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ರತೀಶ್ ಕುಮಾರ್ ರಾಹುಲ್ ಕಚೇರಿಯ ಸಹಾಯಕರಾಗಿದ್ದಾರೆ. ವಿರೋಧ ಪಕ್ಷವು ಈ ಬಂಧನಗಳನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದೆ.