ಅಪರಾಧಿಗಳಬಿಡುಗಡೆ ಸರಿಯೇಎನ್ನುವುದನ್ನುನಿರ್ಧರಿಸುವುದು ನ್ಯಾಯಾಲಯಗಳಿಗೆ ಬಿಟ್ಟಿದ್ದು:ಶಿಕ್ಷೆವಿಧಿಸಿದ್ದ ನ್ಯಾ.ಸಾಳ್ವಿ
(ಬಿಲ್ಕಿಸ್ ಬಾನು ಪ್ರಕರಣ)
ಮುಂಬೈ,ಆ.19: 2002ರ ಗುಜರಾತ ದಂಗೆಗಳ ಸಂದರ್ಭ ಬಿಲ್ಕಿಸ್ ಬಾನುವಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಜನರ ಹತ್ಯೆಗಾಗಿ 2008ರಲ್ಲಿ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದ ನ್ಯಾಯಾಧೀಶ (ನಿವೃತ್ತ) ಯು.ಡಿ.ಸಾಳ್ವಿ ಅವರು,ನೊಂದವರಿಗೆ ಅದು ಚೆನ್ನಾಗಿ ತಿಳಿದಿರುತ್ತದೆ. ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಗುಜರಾತ ಸರಕಾರದ ನಿರ್ಧಾರ ಸರಿಯೇ ಎನ್ನುವುದನ್ನು ನ್ಯಾಯಾಲಯಗಳು ನಿರ್ಧರಿಸಬೇಕಿದೆ ಎಂದು ಗುರುವಾರ ಇಲ್ಲಿ ಹೇಳಿದರು.
ಶಿಕ್ಷೆಯ ವಿನಾಯಿತಿಯನ್ನು ಕೋರಿ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ ಸರಕಾರದ ಸಮಿತಿಯು ಅನುಮೋದಿಸಿದ ಬಳಿಕ ಸೋಮವಾರ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
ಪ್ರಕರಣದ ವಿಚಾರಣೆಯನ್ನು ನಡೆಸಿದ್ದ,ಆಗ ಮುಂಬೈ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸಾಳ್ವಿ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದರು. ಬಿಲ್ಕಿಸ್ ಹೇಳಿಕೆಯು ಧೈರ್ಯದಿಂದ ಕೂಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
‘ಶಿಕ್ಷೆಯನ್ನು ಮಾಫಿ ಮಾಡುವ ಬಗ್ಗೆ ಮಾರ್ಗಸೂಚಿಗಳಿವೆ ಎಂದಷ್ಟೇ ನಾನು ಹೇಳಲು ಬಯಸುತ್ತೇನೆ. ಸರಕಾರವೇ ಈ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಇದರ ಕುರಿತು ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪುಗಳೂ ಇವೆ’ ಎಂದು ಸುದ್ದಿಸಂಸ್ಥೆಯೊಡನೆ ಮಾತನಾಡುತ್ತ ಹೇಳಿದ ನ್ಯಾ.ಸಾಳ್ವಿ,ತೀರ್ಪನ್ನು ಬಹಳ ಹಿಂದೆಯೇ ನೀಡಲಾಗಿತ್ತು. ಈಗ ಅದು ಸರಕಾರದ ಕೈಗಳಲ್ಲಿದೆ. ಸರಕಾರವು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅದು ಸರಿಯೇ ತಪ್ಪೇ ಎನ್ನುವುದನ್ನು ನಿರ್ಧರಿಸುವುದು ಸಂಬಂಧಿತ ನ್ಯಾಯಾಲಯಕ್ಕೆ ಅಥವಾ ಉನ್ನತ ನ್ಯಾಯಾಲಯಕ್ಕೆ ಬಿಟ್ಟ ವಿಷಯವಾಗಿದೆ ಎಂದು ಹೇಳಿದರು.
ಪ್ರಕರಣದ ವಿಚಾರಣೆಯು ನ್ಯಾಯಸಮ್ಮತವಾಗಿ ನಡೆಯುವ ಬಗ್ಗೆ ಆತಂಕ ಮತ್ತು ಬಿಲ್ಕಿಸ್ಗೆ ಬೆದರಿಕೆಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು 2004ರಲ್ಲಿ ಅದನ್ನು ಮುಂಬೈ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
ಅಪರಾಧಿಗಳ ಬಿಡುಗಡೆಯ ಬಳಿಕ ಬಿಲ್ಕಿಸ್ ತನ್ನ ವಕೀಲರ ಮೂಲಕ ಹೇಳಿಕೆಯೊಂದನ್ನು ನೀಡಿದ್ದರು. ‘ಇಂದು ನಾನು ಇದನ್ನು ಮಾತ್ರ ಹೇಳಬಲ್ಲೆ;ಯಾವುದೇ ಮಹಿಳೆಗೆ ನ್ಯಾಯವು ಈ ರೀತಿಯಾಗಿ ಅಂತ್ಯಗೊಳ್ಳುವುದು ಹೇಗೆ? ನಾನು ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯಗಳನ್ನು ನಂಬಿದ್ದೆ. ನಾನು ವ್ಯವಸ್ಥೆಯನ್ನು ನಂಬಿದ್ದೆ ಮತ್ತು ನನಗುಂಟಾದ ಆಘಾತದೊಂದಿಗೆ ಬದುಕಲು ನಿಧಾನವಾಗಿ ಕಲಿಯುತ್ತಿದ್ದೆ. ಈ ಅಪರಾಧಿಗಳ ಬಿಡುಗಡೆಯು ನನ್ನಿಂದ ನನ್ನ ಶಾಂತಿಯನ್ನು ಕಿತ್ತುಕೊಂಡಿದೆ ಮತ್ತು ನ್ಯಾಯದಲ್ಲಿ ನನ್ನ ನಂಬಿಕೆಯನ್ನು ಅಲುಗಿಸಿದೆ ’ ಎಂದು ಬಿಲ್ಕಿಸ್ ಹೇಳಿದ್ದರು. ಬಿಲ್ಕಿಸ್ ಹೇಳಿಕೆಯನ್ನು ತಾನು ನೋಡಿಲ್ಲ ಎಂದು ಹೇಳಿದ ನ್ಯಾ.ಸಾಳ್ವಿ,ಆದರೆ ಪ್ರಕರಣದಲ್ಲಿಯ ತೀರ್ಪು ಎಲ್ಲರೂ ಓದಲಿಕ್ಕಾಗಿದೆ.
ತೀರ್ಪು ಹಲವಾರು ವಿಷಯಗಳನ್ನು ವಿವರಿಸುತ್ತದೆ;ಪ್ರಕರಣದಲ್ಲಿಯ ಸಂದರ್ಭಗಳು,ಯಾರು ಭಾಗಿಯಾಗಿದ್ದರು ಮತ್ತು ಅಪರಾಧವು ಹೇಗೆ ನಡೆದಿತ್ತು...ಹೀಗೆ ಎಲ್ಲವನ್ನೂ. ಅವರು (ಬಿಲ್ಕಿಸ್) ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಹೆಸರುಗಳನ್ನು ಹೇಳಿದ್ದರು. ಅದು ಆರೋಪಿಗಳ ಗುರುತನ್ನು ಮಾತ್ರವೇ ಆಧರಿಸಿರಲಿಲ್ಲ. ತೀರ್ಪು ಸ್ವಯಂ ಆಗಿ ಎಲ್ಲವನ್ನೂ ಹೇಳುತ್ತದೆ. ತೀರ್ಪು,ನ್ಯಾಯಾಲಯದ ಮುಂದಿದ್ದ ಸಾಕ್ಷಾಧಾರಗಳು, ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪಿನ ದೃಢೀಕರಣ ಹೀಗೆ ಎಲ್ಲವನ್ನೂ ನೋಡಬಹುದು. ಇವು ಈಗ ವಾಸ್ತವಿಕ ಸನ್ನಿವೇಶದೊಂದಿಗೆ ಸಮಗ್ರವಾಗಿ ಪರಿಶೀಲಿಸಿ ನಿರ್ಧಾರವೊಂದನ್ನು ಕೈಗೊಳ್ಳಬೇಕಾದ ಸರಕಾರದ ಮುಂದಿವೆ. ಅದನ್ನು ಪ್ರತ್ಯೇಕವಾಗಿ ನೋಡುವಂತಿಲ್ಲ ಎಂದು ಹೇಳಿದರು.