ಎಫ್ಐಆರ್ ದಾಖಲಿಸಲು ವಿಳಂಬ ಎಂದು ಅತ್ಯಾಚಾರ ಆರೋಪಿಯನ್ನು ಖುಲಾಸೆ ಮಾಡಿದ ಮ.ಪ್ರ ಹೈಕೋರ್ಟ್: ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ: ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ "ಸಂಪೂರ್ಣವಾಗಿ ಗ್ರಹಿಸಲಾಗದ" ಎಂದು ಬಣ್ಣಿಸಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಜೆಬಿ ಪಾರ್ದಿವಾಲಾ ಅವರ ಪೀಠವು ವಿಚಾರಣೆಯ ಸತ್ಯಗಳು "ಹೃದಯ ವಿದ್ರಾವಕ" ಎಂದು ಹೇಳಿದೆ. ಹೈಕೋರ್ಟ್ನ ಆದೇಶವನ್ನು ತಳ್ಳಿಹಾಕಿದ ಪೀಠ, ಇದನ್ನು "ವಿಕೃತ ಮತ್ತು ಕಾನೂನಿನಲ್ಲಿ ಸಮರ್ಥನೀಯವಲ್ಲ" ಎಂದು ಬಣ್ಣಿಸಿದೆ. ಆಗಸ್ಟ್ 12 ರಂದು ಆದೇಶವನ್ನು ನೀಡಲಾಗಿದ್ದರೂ, ಅದರ ಪ್ರತಿಯನ್ನು ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಇನ್ನೂ ಪ್ರಕಟಿಸಲಾಗಿಲ್ಲ.
ಪುನರಾವರ್ತನೆಯ ಸಾಧ್ಯತೆಯ ದೃಷ್ಟಿಯಿಂದ, ರದ್ದುಪಡಿಸಿದ ಹೈಕೋರ್ಟ್ನ ಆದೇಶವು ಸಂಪೂರ್ಣವಾಗಿ ಗ್ರಹಿಸಲಾಗದು ಎಂದು ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದ್ದಾರೆ. ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡುವುದು ಸೂಕ್ತ ಎಂದು ಹೈಕೋರ್ಟ್ ಪರಿಗಣಿಸಿರುವಂತಹ ಯಾವುದೇ ಪ್ರಕರಣ ಇದುವರೆಗೆ ಅವರ ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.
ಲೈವ್ಲಾ ಪ್ರಕಾರ, ಪ್ರಕರಣವು ಅಪ್ರಾಪ್ತ ಬಾಲಕಿಯ ಸಾವಿನ ಬಗ್ಗೆ ಸಂಬಂಧಿಸಿದೆ, ಆರೋಪಿಯಿಂದಾಗಿ ಗರ್ಭ ಧರಿಸಿ, ಹೆತ್ತ ನಂತರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಏಪ್ರಿಲ್ 27, 2020 ರಂದು, ಸಂತ್ರಸ್ತೆ ಹೊಟ್ಟೆ ನೋವಿನಿಂದ ಬಳಲಿದ್ದು, ಆರಂಭದಲ್ಲಿ ಇದು ಹೊಟ್ಟೆಯ ಗೆಡ್ಡೆ ಎಂದು ಭಾವಿಸಿ ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿತ್ತು. ನರ್ಸಿಂಗ್ ಹೋಮ್ನಲ್ಲಿ ವೈದ್ಯರಿಗಾಗಿ ಕಾಯುತ್ತಿರುವಾಗ, ಬಾಲಕಿ ಬೆಂಚ್ ಮೇಲೆ ಮಗುವಿಗೆ ಜನ್ಮ ನೀಡಿದ್ದಳು.
ಆರೋಪಿ ತಿವಾರಿ ತನ್ನ ಮಗುವಿನ ತಂದೆ ಮತ್ತು ಅವರಿಬ್ಬರೂ ಹತ್ತಿರದ ಪಟ್ಟಣದಲ್ಲಿ ತಮ್ಮ ಮಗುವಿನೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ ಎಂದು ಹುಡುಗಿ ತನ್ನ ತಂದೆಗೆ ತಿಳಿಸಿದ್ದಳು.
ಸಂತ್ರಸ್ತೆಯ ತಂದೆ ಗ್ರಾಮದಿಂದ ಸ್ವಲ್ಪ ಹಣವನ್ನು ತರಲು ಹೋಗಿದ್ದರು, ಅವರು ಹಿಂದಿರುಗುವ ವೇಳೆಗೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿಶು ಡ್ರೆಸ್ಸಿಂಗ್ ಟೇಬಲ್ ಮೇಲೆ ಮಲಗಿತ್ತು. ಬಳಿಕ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಮತ್ತು 306 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ದಾಖಲಿಸಿತ್ತು.
ಆರೋಪಿಗಳು ಸಲ್ಲಿಸಿದ ಪರಿಷ್ಕರಣೆ ಅರ್ಜಿಯನ್ನು ಅನುಮತಿಸಿದ ಮಧ್ಯಪ್ರದೇಶ ಹೈಕೋರ್ಟ್, “ಮೃತರ (ಸಂತ್ರಸ್ತೆ) ಜೀವಿತಾವಧಿಯಲ್ಲಿಯೂ ಅವರು ಪೊಲೀಸರನ್ನು ಸಂಪರ್ಕಿಸಿಲ್ಲ. ಸಂತ್ರಸ್ತೆಯ ತಾಯಿ ಹೇಳಿರುವ ಕಥೆಯು ವಿಳಂಬದ ಆಧಾರದ ಮೇಲೆ ಅನುಮಾನಾಸ್ಪದವಾಗಿದೆ” ಎಂದು ಹೇಳಿ ನ್ಯಾಯಾಲಯ ಆರೋಪಿಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.
ಈ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಟೀಕಿಸಿದೆ. ಸಂತ್ರಸ್ತೆಯ ತಂದೆ ನ್ಯಾಯಕ್ಕಾಗಿ ಈ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗಿರುವುದು "ವಿಚಾರಣೆಯ ಗೊಂದಲದ ಸಂಗತಿ" ಎಂದು ಪೀಠ ಹೇಳಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್ ನ ಆ ಆದೇಶವನ್ನು ರದ್ದುಗೊಳಿಸಿದ್ದು, 18 ಡಿಸೆಂಬರ್ 2020 ರಂದು ಆರೋಪಗಳನ್ನು ರೂಪಿಸುವ ತೀರ್ಪಿನ ಪ್ರಕಾರ ವಿಚಾರಣಾ ನ್ಯಾಯಾಲಯವನ್ನು ವಿಚಾರಣೆ ಮಾಡಲು ಅವಕಾಶ ನೀಡಿದೆ.
ಆದಾಗ್ಯೂ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧದಿಂದ ಆರೋಪಿ ಅಮಿತ್ ಕುಮಾರ್ ತಿವಾರಿ ಅವರನ್ನು ಖುಲಾಸೆಗೊಳಿಸುವ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲಿಲ್ಲ. ಡಿಸೆಂಬರ್ 2, 2021 ರ ಹೈಕೋರ್ಟ್ನ ಆದೇಶವನ್ನು ಉಲ್ಲೇಖಿಸಿದ ಪೀಠವು, ನಿರ್ದಿಷ್ಟವಾಗಿಲ್ಲದಿದ್ದರೂ ಸತ್ತವರ (ಅತ್ಯಾಚಾರ ಸಂತ್ರಸ್ತೆಯ) ವಯಸ್ಸಿಗೆ ಸಂಬಂಧಿಸಿದಂತೆ ವಾದಗಳನ್ನು ದಾಖಲಿಸಲು ಹೈಕೋರ್ಟ್ ಎರಡು ಪ್ಯಾರಾಗಳನ್ನು ಮೀಸಲಿಟ್ಟಿದೆ ಎಂದು ಗಮನಿಸಬೇಕು ಎಂದು ಹೇಳಿದೆ. ಹೈಕೋರ್ಟ್ ಸಂಪೂರ್ಣವಾಗಿ ವಿಭಿನ್ನ ದಿಕ್ಕಿನಲ್ಲಿ ಸಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಫ್ಐಆರ್ ದಾಖಲಿಸಲು ವಿಳಂಬವಾಗಿದೆ ಮತ್ತು ಮೃತರ ಪೋಷಕರು ನೀಡಿದ ಸಂಪೂರ್ಣ ದೂರು ಅನುಮಾನಾಸ್ಪದವಾಗಿದೆ ಎಂಬ ಕಾರಣಕ್ಕಾಗಿ ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸುವುದು ಸೂಕ್ತವೆಂದು ಹೈಕೋರ್ಟ್ ಪರಿಗಣಿಸಿದೆ ಎಂದು ಸುಪ್ರೀಂ ಹೇಳಿದೆ.