ಯಾವುದೇ ಪಿತೂರಿಗಳು ನನ್ನನ್ನು ಭಗ್ನಗೊಳಿಸದು: ಮನೀಶ್ ಸಿಸೋಡಿಯ
ಹೊಸದಿಲ್ಲಿ, ಆ. 19: ಉತ್ತಮ ಶಿಕ್ಷಣಕ್ಕಾಗಿ ನಿರಂತರ ಶ್ರಮಿಸುವ ತನ್ನ ದೃಢ ನಿರ್ಧಾರವನ್ನು ಸಂಚುಗಳು ಭಗ್ನಗೊಳಿಸಲಾರವು ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರ ಹೇಳಿದ್ದಾರೆ.
‘‘ನಾವು ಪ್ರಾಮಾಣಿಕರಾಗಿದ್ದು, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ದುರಾದೃಷ್ಟಕರ. ಆದುದರಿಂದಲೇ ನಮ್ಮ ದೇಶ ನಂಬರ್ ಒಂದು ಆಗಲು ಸಾಧ್ಯವಾಗಲಿಲ್ಲ’’ ಎಂದು ಸಿಸೋಡಿಯಾ ಹೇಳಿದ್ದಾರೆ.
ಟ್ವಿಟರ್ನಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿದ ಅವರು, ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಇದರಿಂದ ಸತ್ಯ ಬಹುಬೇಗನ ಬಹಿರಂಗವಾಗಲಿದೆ. ಇದುವರೆಗೆ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ, ಯಾವುದೂ ಸಾಬೀತಾಗಿಲ್ಲ. ಈ ಪ್ರಕರಣ ಕೂಡ ಸಾಬೀತಾಗದು. ಈ ದೇಶದಲ್ಲಿ ಉತ್ತಮ ಶಿಕ್ಷಣಕ್ಕೆ ನನ್ನ ಶ್ರಮ ನಿಲ್ಲುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
‘‘ನಿಮ್ಮ ಸಂಚುಗಳು ನನ್ನನ್ನು ಭಗ್ನಗೊಳಿಸಲಾರವು. ದಿಲ್ಲಿಯ ಲಕ್ಷಾಂತರ ಮಕ್ಕಳಿಗಾಗಿ ನಾನು ಈ ಶಾಲೆಯನ್ನು ರೂಪಿಸಿದ್ದೇನೆ. ಲಕ್ಷಾಂತರ ಮಕ್ಕಳಲ್ಲಿ ನಗು ತರಿಸಿರುವುದು ನನ್ನ ಸಾಮರ್ಥ್ಯ. ನನ್ನನ್ನು ಭಗ್ನಗೊಳಿಸುವುದು ನಿಮ್ಮ ಉದ್ದೇಶ’’ ಎಂದು ಸಿಸೋಡಿಯಾ ಹೇಳಿದರು.