ಕಾಂಗ್ರೆಸ್ ಗೆ ಮತ್ತೊಂದು ಆಘಾತ: ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ರಾಜೀನಾಮೆ
ಜೈವೀರ್ ಶೆರ್ಗಿಲ್ (Photo: Facebook)
ಹೊಸದಿಲ್ಲಿ: ಕಾಂಗ್ರೆಸ್(Congress) ಪಕ್ಷಕ್ಕೆ ಮತ್ತೊಂದು ಆಘಾತವೆಂಬಂತೆ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್(Jaiveer Shergill) ಅವರು ಆಗಸ್ಟ್ 24 ಬುಧವಾರದಂದು ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
"ನಾನು ಈ ಮೂಲಕ ಪಕ್ಷದ ರಾಷ್ಟ್ರೀಯ ವಕ್ತಾರ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಪ್ರಾಥಮಿಕ ಕಾರಣವೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಸ್ತುತ ನಿರ್ಧಾರ ತೆಗೆದುಕೊಳ್ಳುವವರ ಸಿದ್ಧಾಂತ ಮತ್ತು ದೂರದೃಷ್ಟಿಯು ಯುವಜನತೆ ಮತ್ತು ಆಧುನಿಕ ಭಾರತದ ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ" ಎಂದು ಶೆರ್ಗಿಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ.
"ಇದಲ್ಲದೆ, ಪಕ್ಷವು ನಿರ್ಧಾರ ತೆಗೆದುಕೊಳ್ಳುವುದು ಸಾರ್ವಜನಿಕ ಮತ್ತು ದೇಶದ ಹಿತಾಸಕ್ತಿಗಳಿಗಾಗಿ ಅಲ್ಲ ಎಂದು ಹೇಳಲು ನನಗೆ ಸ್ವತಃ ನೋವಾಗುತ್ತದೆ. ಬದಲಿಗೆ ಇದು ಕೆಲವು ಹಿತಾಸಕ್ತಿಗಳಿಂದ ಪ್ರಭಾವಿತವಾಗಿರುತ್ತದೆ. ಇದನ್ನು ನಾನು ನೈತಿಕವಾಗಿ ಒಪ್ಪಿಕೊಳ್ಳಲು ಅಥವಾ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ." ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.