ದ್ವೇಷ, ಭೀತಿ ರಾಜಕಾರಣದ ವಿರುದ್ಧ ಧ್ವನಿ ಎತ್ತಿ: ರಣಬೀರ್ ಪ್ರಕರಣದ ಬಳಿಕ ಶಿವಸೇನಾ ಸಂಸದೆ ಟ್ವೀಟ್
ಮುಂಬೈ: ಬಾಲಿವುಡ್ ತಾರಾ ಜೋಡಿ ರಣಬೀರ್ ಕಪೂರ್- ಅಲಿಯಾ ಭಟ್ ಅವರನ್ನು ಮಧ್ಯಪ್ರದೇಶದ ಮಹಾಕಾಲ ದೇವಸ್ಥಾನ ಪ್ರವೇಶಿಸದಂತೆ ಬಜರಂಗ ದಳ ಕಾರ್ಯಕರ್ತರು ತಡೆದ ಬಗ್ಗೆ ಟ್ವೀಟ್ ಮಾಡಿರುವ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, "ದ್ವೇಷ ಹಾಗೂ ಭೀತಿ ರಾಜಕಾರಣದ ವಿರುದ್ಧ ಚಿತ್ರೋದ್ಯಮ ಧ್ವನಿ ಎತ್ತಬೇಕು" ಎಂದು ಕರೆ ನೀಡಿದ್ದಾರೆ.
ಬಾಲಿವುಡ್ ನಟ ನಟಿಯರು ಹಾಗೂ ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿ ಜತೆಗೆ ಇರುವ ಹಳೆಯ ಚಿತ್ರವನ್ನು ಹಂಚಿಕೊಂಡಿರುವ ಅವರು, "ಈ ದ್ವೇಷಕ್ಕೆ ನೀವು ಕೇವಲ ಮೂಕಪ್ರೇಕ್ಷಕರಾಗಿದ್ದರೆ ಈ "ಫೋಟೊ ಆಪ್" ಯಾವ ರೀತಿಯಲ್ಲೂ ನೆರವಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
"ವೇಗವಾಗಿ ಮುನ್ನುಗ್ಗುತ್ತಿರುವ ದ್ವೇಷ, ಭೀತಿ ಹಾಗೂ ಧ್ವನಿಯಡಗಿಸುವ ನಿಟ್ಟಿನಲ್ಲಿ ಪ್ರತಿ ಚಿತ್ರ ಬಿಡುಗಡೆ ಸಂದರ್ಭದಲ್ಲೂ ನಡೆಸುತ್ತಿರುವ ಇಂಥ ಆಯ್ದ ಪ್ರತಿಭಟನೆಯನ್ನು ಹಿಮ್ಮೆಟ್ಟಿಸಲು ಸಂಘಟಿತರಾಗಿ ಹೋರಾಡುವುದು ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
"ದ್ವೇಷಕ್ಕೆ ನೀವು ಮೂಕಪ್ರೇಕ್ಷಕರಾಗಿ ಉಳಿಯುವವರೆಗೂ ಇಂಥ ಫೋಟೊ ಆಪ್ನಿಂದ ನಿಮಗೆ ಯಾವ ನೆರವೂ ಆಗದು. ರಾಜಕೀಯ ಮಾತನಾಡುವುದು ನಮ್ಮ ಕೆಲಸವಲ್ಲ ಎನ್ನುವುದರಲ್ಲಿ ನಂಬಿಕೆ ಇಡಿ. ನಿಮ್ಮ ವಿರುದ್ಧವೂ ಅವರು ಬಂದೇ ಬರುತ್ತಾರೆ. ಈ ನಿಟ್ಟಿನಲ್ಲಿ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯ ಪ್ರತಿಭಟನೆ ಒಂದು ನಿದರ್ಶನ, ರಾಜಕೀಯ ಪೂರ್ವಾಗ್ರಹ ಇಂಥ ಕೀಳುಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು" ಎಂದು ಟ್ವೀಟಿಸಿದ್ದಾರೆ.