ಈ ಚಿರತೆಗಳಿಗೆ ವಿಮಾನಯಾನ ಯೋಗ: ಕಾರಣ ಏನು ಗೊತ್ತೇ ?
ಸಾಂದರ್ಭಿಕ ಚಿತ್ರ
ಭೋಪಾಲ್: ಎಂಟು ಚಿರತೆಗಳನ್ನು ಕರೆ ತರುತ್ತಿರುವ ವಿಶೇಷ ಸರಕು ಸಾಗಾಣಿಕೆ ವಿಮಾನ ನಮೀಬಿಯಾದಿಂದ ಮಧ್ಯಪ್ರದೇಶಕ್ಕೆ ಆಗಮಿಸುತ್ತಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
ಎಂಟು ಚಿರತೆಗಳು ಮತ್ತು ಸಿಬ್ಬಂದಿ ಇದ್ದ ವಿಮಾನ ನಮೀಬಿಯಾ ರಾಜಧಾನಿ ವಿಂಡೋಕ್ನಿಂದ ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 8.30ಕ್ಕೆ ಹೊರಟಿದ್ದು, ಶನಿವಾರ ಮುಂಜಾನೆ 6 ಗಂಟೆಗೆ ಗ್ವಾಲಿಯರ್ನ ಮಹಾರಾಜಪುರ ವಾಯುನೆಲೆ ತಲುಪಲಿದೆ ಎಂದು ಮಧ್ಯಪ್ರದೇಶ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ (ವನ್ಯಜೀವಿ) ಜೆ.ಎಸ್.ಚೌಹಾಣ್ ವಿವರಿಸಿದ್ದಾರೆ.
ಎಲ್ಲ ಅಗತ್ಯ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಗ್ವಾಲಿಯರ್ ನಿಂದ ಚಿರತೆಗಳನ್ನು ಶಿವಪುರ ಜಿಲ್ಲೆಯ ಪಾಲಪುರ ಗ್ರಾಮಕ್ಕೆ ಚಿನೂಕ್ ಹೆಲಿಕಾಪ್ಟರ್ ಸೇರಿದಂತೆ ಎರಡು ಹೆಲಿಕಾಪ್ಟರ್ ಗಳಲ್ಲಿ ಕರೆದೊಯ್ಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪಾಲಪುರದಿಂದ ಶಿವಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಇವುಗಳನ್ನು ರಸ್ತೆ ಮೂಲಕ ಕರೆದೊಯ್ದು ಬಳಿಕ ವನ್ಯಧಾಮಕ್ಕೆ ಬಿಡಲಾಗುವುದು ಎಂದು ವಿವರ ನೀಡಿದ್ದಾರೆ.
ಭಾರತದಲ್ಲಿ ಎಂಟು ದಶಕಗಳಿಂದ ವಿನಾಶವಾಗಿದ್ದ ಈ ಅಪರೂಪದ ಚಿರತೆ ಪ್ರಬೇಧ ಇದೀಗ ಮತ್ತೆ ಭಾರತಕ್ಕೆ ಕರೆ ತರಲಾಗುತ್ತಿದೆ. ತಮ್ಮ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರಾಣಿಗಳನ್ನು 10 ಕಿಲೋಮೀಟರ್ ಹರಡಿರುವ ಪ್ರದೇಶಕ್ಕೆ ಬಿಡಲಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮತ್ತು ವನ್ಯಜೀವಿ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ>>> ಶಿವಮೊಗ್ಗ: ಲಾಡ್ಜ್ ನಲ್ಲಿ ತುಮಕೂರು ಮೂಲದ ಯುವಕ ಆತ್ಮಹತ್ಯೆ
2-5 ವರ್ಷ ವಯಸ್ಸಿನ ಐದು ಹೆಣ್ಣು ಚಿರತೆಗಳು ಮತ್ತು 4.5- 5.5 ವರ್ಷದ ಮೂರು ಗಂಡು ಚಿರತೆಗಳನ್ನು ನಮೀಬಿಯಾದಿಂದ ಬೋಯಿಂಗ್ 747-400 ವಿಮಾನದಲ್ಲಿ ತರಲಾಗುತ್ತಿದೆ.
"ಪರಿಸರಾತ್ಮಕ ಪ್ರಮಾದಗಳು ಸಂಭವಿಸುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದಾಗಿದ್ದು, ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಚಿರತೆಗಳು ಅತಿಯಾದ ಬೇಟೆಯಿಂದಾಗಿ ಭಾರತದಲ್ಲಿ ವಿನಾಶದ ಅಂಚಿನಲ್ಲಿವೆ ಎಂದು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ.