ಶಿವಸೇನೆ ಸಂಸದ ಸಂಜಯ್ ರಾವುತ್ ಗೆ ಜಾಮೀನು ವಿರೋಧಿಸಿದ ಜಾರಿ ನಿರ್ದೇಶನಾಲಯ
Photo:PTI
ಮುಂಬೈ (ಮಹಾರಾಷ್ಟ್ರ): ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut)ಅವರು ಪತ್ರಾ ಚಾಲ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಅವರು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ರಾವುತ್ ರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ (ಈಡಿ) ಶುಕ್ರವಾರ ವಿರೋಧಿಸಿದೆ.
ಸಂಜಯ್ ರಾವುತ್ ಮುಂಬೈನ ವಿಶೇಷ ಪಿಎಂಎಲ್ಎ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈಡಿ ತನ್ನ ಉತ್ತರವನ್ನು ಸಲ್ಲಿಸಿದೆ.
ಈಡಿ ಶುಕ್ರವಾರ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಪ್ರತ್ಯುತ್ತರ ಸಲ್ಲಿಸಿದ್ದು, ಸಂಜಯ್ ರಾವುತ್ ಅವರು ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿದ್ದು, ಈ ಕುರಿತು ಈಡಿ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿದೆ.
ಸಂಜಯ್ ರಾವತ್ ವಿರುದ್ಧ ಸೆಪ್ಟೆಂಬರ್ 15 ರಂದು ಪೂರಕ ಪ್ರಾಸಿಕ್ಯೂಷನ್ ದೂರು ದಾಖಲಿಸಿರುವುದಾಗಿ ಈಡಿ ತನ್ನ ಉತ್ತರದಲ್ಲಿ ಉಲ್ಲೇಖಿಸಿದೆ.
ಸಂಜಯ್ ರಾವುತ್ ವಿರುದ್ಧ ಮೊದಲ ಪ್ರಾಸಿಕ್ಯೂಷನ್ ದೂರನ್ನು ಎಪ್ರಿಲ್ 1, 2022 ರಂದು ದಾಖಲಿಸಲಾಗಿದೆ ಎಂದು ಅದು ಹೇಳಿದೆ.
ಸಂಜಯ್ ರಾವುತ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ.