ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪ: ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಸಿಬಿಐ ಮನವಿ
Photo:PTI
ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆಯ ಕೆಲವು ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ಗೆ(Tejashwi Yadav) "ಉದ್ಯೋಗಕ್ಕಾಗಿ ಭೂಮಿ" ನೀಡಿದ ಪ್ರಕರಣದಲ್ಲಿ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಸಿಬಿಐ ಇಂದು ದಿಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ತೇಜಸ್ವಿ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಿಬಿಐ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಆ ಮೂಲಕ ಪ್ರಕರಣದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ನ್ಯಾಯಾಲಯದ ಮುಂದೆ ಸಿಬಿಐ ವಾದಿಸಿದೆ.
ನ್ಯಾಯಾಲಯವು ತೇಜಸ್ವಿ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಹಾಗೂ ಸಿಬಿಐ ಮನವಿಗೆ ಅವರ ಪ್ರತಿಕ್ರಿಯೆಯನ್ನು ಕೇಳಿದೆ.
ಕಳೆದ ತಿಂಗಳು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, "ಸಿಬಿಐ ಅಧಿಕಾರಿಗಳಿಗೆ ತಾಯಿ ಮತ್ತು ಮಕ್ಕಳಿಲ್ಲವೇ? ಅವರಿಗೆ ಕುಟುಂಬವಿಲ್ಲವೇ? ಅವರು ಯಾವಾಗಲೂ ಸಿಬಿಐ ಅಧಿಕಾರಿಗಳಾಗಿಯೇ ಇರುತ್ತಾರೆಯೇ? ಅವರು ನಿವೃತ್ತರಾಗುವುದಿಲ್ಲವೇ? ಈ ಪಕ್ಷ ಮಾತ್ರ ಅಧಿಕಾರದಲ್ಲಿ ಉಳಿಯುತ್ತದೆಯೇ? ನೀವು ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತೀರಿ? ನೀವು ಸಾಂವಿಧಾನಿಕ ಸಂಸ್ಥೆಯ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು"ಎಂದು ಹೇಳಿದ್ದರು.