ದಿಲ್ಲಿ: ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್, ನಾಲ್ವರು ಮೃತ್ಯು
Photo:NDTV
ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ನಿನ್ನೆ ರಾತ್ರಿ ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್ ಹರಿದು ಹೋದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.
ಮುಂಜಾನೆ 1.51ಕ್ಕೆ ಸೀಮಾಪುರಿ ಪ್ರದೇಶದ ದಿಲ್ಲಿ ಸಾರಿಗೆ ಸಂಸ್ಥೆ (ಡಿಟಿಸಿ) ಬಸ್ ಡಿಪೋ ಬಳಿ ಸಂಭವಿಸಿದ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕರೀಂ (52 ವರ್ಷ), ಛೋಟೆ ಖಾನ್ (25 ವರ್ಷ), ಶಾ ಆಲಂ (38 ವರ್ಷ) ಮತ್ತು ರಾಹು (45 ವರ್ಷ) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಮನೀಶ್(16)ಹಾಗೂ ಪ್ರದೀಪ್ (30) ಸೇರಿದ್ದಾರೆ.
ಆರು ಬಲಿಪಶುಗಳಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಇತರ ನಾಲ್ವರನ್ನು ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ಒಬ್ಬ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಮತ್ತು ಇನ್ನೊಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ಉಪ ಪೊಲೀಸ್ ಆಯುಕ್ತ (ಶಹದಾರ) ಆರ್. ಸತ್ಯಸುಂದರಂ ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ ಅವರ ಮೃತದೇಹಗಳು ಡಿವೈಡರ್ ಬಳಿ ಬಿದ್ದಿದ್ದು, ವಿದ್ಯುತ್ ಕಂಬವೊಂದು ಸ್ಥಳದಲ್ಲೇ ಉರುಳಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ.
ಘಟನೆಯ ನಂತರ ಚಾಲಕ ಟ್ರಕ್ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ಪತ್ತೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.