ಜ್ಞಾನವಾಪಿ 'ಶಿವಲಿಂಗ'ದ ಕಾರ್ಬನ್ ಡೇಟಿಂಗ್ಗೆ ಕೋರ್ಟ್ ನಕಾರ
ಜ್ಞಾನವಾಪಿ ಮಸೀದಿ
ವಾರಣಾಸಿ: ಜ್ಞಾನವಾಪಿ ಮಸೀದಿಯ ಆವರಣದ ಶುದ್ಧಸ್ನಾನ ಕೊಳದಲ್ಲಿ ಕೋರ್ಟ್ ಕಮಿಷನರ್ ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸ್ಥಳವನ್ನು ರಕ್ಷಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಇಡೀ ಕಟ್ಟಡ ಸಂಕೀರ್ಣದ ಕಾರ್ಬನ್ ಡೇಟಿಂಗ್ ನಡೆಸಬೇಕು ಎಂಬ ಹಿಂದೂ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಜ್ಞಾನವಾಪಿ ಮಸೀದಿ ಆವರಣದ ಕಾರ್ಬನ್ ಡೇಟಿಂಗ್ ಹಾಗೂ ವೈಜ್ಞಾನಿಕ ತನಿಖೆಗೆ ಆದೇಶ ನೀಡಬೇಕು ಎಂದು ನಾಲ್ವರು ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವಾವೇಶ ಅವರು ಈ ಆದೇಶವನ್ನು ನೀಡಿದ ತಕ್ಷಣ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ವಿಷ್ಣು ಜೈನ್, ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
"ಮೇ 16ರಂದು ಕೋರ್ಟ್ ಕಮಿಷನ್ ಸಮೀಕ್ಷೆ ವೇಳೆ ಪತ್ತೆಯಾದ ಶಿವಲಿಂಗದ ಸ್ವರೂಪ, ಆಕೃತಿ ಮತ್ತು ಪ್ರಾಚೀನತೆಯನ್ನು ಅಧ್ಯಯನ ಮಾಡಲು ನೆಲ ಛೇದಕ ರಾರಾಡ್ ಬಳಸಿ ಕಾರ್ಬನ್ ಡೇಟಿಂಗ್ ಹಾಗೂ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಸುಪ್ರೀಂಕೋರ್ಟ್ ತನ್ನ ಮೇ 17ರ ಆದೇಶದಲ್ಲಿ ಈ ಸ್ಥಳವನ್ನು ರಕ್ಷಿಸುವಂತೆ ಸೂಚಿಸಿದೆ. ಕಾರ್ಬನ್ ಡೇಟಿಂಗ್ ಅಥವಾ ನೆಲ ಛೇದಕ ರಾಡಾರ್ ಬಳಕೆಗೆ ಅನುಮತಿ ನೀಡಿದರೆ ಅದು ಶಿವಲಿಂಗಕ್ಕೆ ಹಾನಿ ಉಂಟು ಮಾಡಲಿದೆ. ಅದು 2022ರ ಮೇ 17ರ ಆದೇಶದ ಉಲ್ಲಂಘನೆಯಾಗುತ್ತದೆ. ಅದು ನೆರೆದ ಜನರ ಧಾರ್ಮಿಕ ಭಾವನೆಗಳಿಗೆ ಕೂಡಾ ಧಕ್ಕೆ ಉಂಟು ಮಾಡಿದಂತಾಗುತ್ತದೆ" ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.