ಈಡೇರಿಸದ ಭರವಸೆ: ನ.26 ರಂದು ಕೇಂದ್ರದ ವಿರುದ್ಧ ರಾಜಭವನ ಛಲೋ ನಡೆಸಲು ಎಸ್ಕೆಎಂ ನಿರ್ಧಾರ
ಹೊಸದಿಲ್ಲಿ: ರೈತರ ಬೇಡಿಕೆಗಳ ಕುರಿತು ಕೇಂದ್ರ ನೀಡಿದ ಭರವಸೆ ಉಲ್ಲಂಘಿಸಿದೆ ಎಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನವೆಂಬರ್ 26 ರಂದು ರಾಜಭವನಗಳಿಗೆ ರಾಷ್ಟ್ರವ್ಯಾಪಿ ಮೆರವಣಿಗೆ ನಡೆಸಲಿದೆ ಎಂದು ಸಂಘಟನೆಯು ಗುರುವಾರ ಹೇಳಿದೆ.
ಕೇಂದ್ರವು ರದ್ದುಪಡಿಸಿದ ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸಿದ್ದ ರೈತ ಸಂಘಗಳ ಒಕ್ಕೂಟವಾಗಿರುವ ಎಸ್ಕೆಎಂ, ರೈತ ಚಳವಳಿಯ ಮುಂದಿನ ಹಾದಿಯನ್ನು ನಿರ್ಧರಿಸಲು ಡಿಸೆಂಬರ್ 8 ರಂದು ಸಭೆಯನ್ನು ಕರೆದಿದೆ.
ರೈತರು ತಮ್ಮ ಆಂದೋಲನದ ನಂತರ ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವು ಆದೇಶಿಸಿದ್ದ ದಿನದ ನೆನಪಿಗಾಗಿ ರೈತರು ನವೆಂಬರ್ 19 ಅನ್ನು "ಫತೇ ದಿವಸ್" ಅಥವಾ "ವಿಜಯ ದಿವಸ" ಎಂದು ಆಚರಿಸಲಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳ ಲೋಕಸಭೆ ಮತ್ತು ರಾಜ್ಯಸಭಾ ಸಂಸದರ ಕಚೇರಿಗಳಿಗೆ ಡಿಸೆಂಬರ್ 1 ರಿಂದ 11 ರವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಎಸ್ಕೆಎಂ ನಾಯಕ ದರ್ಶನ್ ಪಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್ಕೆಎಂ ಕೇಂದ್ರ ಸರ್ಕಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಡಿಸೆಂಬರ್ 9 ರಂದು ಪ್ರತಿಭಟನೆಯನ್ನು ಹಿಂತೆಗೆದುಕೊಂಡಾಗ ರೈತರಿಗೆ ನೀಡಿದ್ದ ಲಿಖಿತ ಭರವಸೆಯನ್ನು ಕೇಂದ್ರವು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಆರೋಪಿಸಿದೆ.
ಕನಿಷ್ಠ ಬೆಂಬಲ ಬೆಲೆಯ ಸಮಿತಿಯನ್ನು ರಚಿಸಲಾಗಿಲ್ಲ ಹಾಗೂ ಆಂದೋಲನದ ಸಮಯದಲ್ಲಿ ರೈತರ ವಿರುದ್ಧ ದಾಖಲಿಸಲಾದ “ಸುಳ್ಳು” ಪ್ರಕರಣಗಳನ್ನು ಹಿಂಪಡೆದಿಲ್ಲ ಎಂದು ರೈತ ಸಂಘವು ಹೇಳಿದೆ.
ರೈತರ ದೊಡ್ಡ ಬೇಡಿಕೆಯಾದ ಎಂಎಸ್ಪಿ ಮೇಲಿನ ಕಾನೂನು ಖಾತರಿಯನ್ನು ಪರಿಗಣಿಸಲು ಸರ್ಕಾರ ಇನ್ನೂ ಸಿದ್ಧವಾಗಿಲ್ಲ ಎಂದು ಅದು ಆರೋಪಿಸಿದೆ.