ರಸ್ತೆ ಅಂಚಿಗೆ ಕಾರು ನಿಲ್ಲಿಸಲು ಸೂಚಿಸಿದ್ದಕ್ಕೆ ಪೇದೆಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಮಾಜಿ ಸಚಿವೆ: ಪ್ರಕರಣ ದಾಖಲು
ಜೈಪುರ: ಭರತ್ಪುರ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಕಪಾಳಮೋಕ್ಷ (slapping) ಮಾಡಿ, ನಿಂದಿಸಿದ (abusing) ಆರೋಪದ ಮೇಲೆ ರಾಜಸ್ತಾನದ ಬಿಜೆಪಿ (BJP) ಮಾಜಿ ಸಚಿವೆ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ದೂರು ನೀಡಿರುವ ರಾಜಸ್ತಾನ ಸಶಸ್ತ್ರ ಪಡೆಯ ಪೇದೆ ಗಜ್ರಾಜ್ ಸಿಂಗ್, ನೆಬ್ ಚೌರಾಹಾದ ಪೊಲೀಸ್ ಚೆಕ್ಪೋಸ್ಟ್ ಬಳಿ ಕಾರನ್ನು ರಸ್ತೆಯ ಅಂಚಿಗೆ ನಿಲ್ಲಿಸುವಂತೆ ಸೂಚಿಸಿದ್ದಕ್ಕೆ ಸಿಟ್ಟಿಗೆದ್ದ ಮಾಜಿ ಸಚಿವೆ ಕೃಷ್ಣೇಂದ್ರ ಕೌರ್ ದೀಪಾ, ನನ್ನ ಕೆನ್ನೆಗೆ ಬಾರಿಸಿ, ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೇದೆಯ ದೂರನ್ನು ಆಧರಿಸಿ ದೀಪಾ ಹಾಗೂ ಇನ್ನಿಬ್ಬರ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಠಾಣಾಧಿಕಾರಿ ದಿನೇಶ್ ಕುಮಾರ್, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕೃಷ್ಣೇಂದ್ರ ಕೌರ್ ದೀಪಾ ಈ ಹಿಂದಿನ ವಸಂಧುರ ರಾಜೇ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ ಮೂತ್ರಪಿಂಡ ಕಸಿ ಪ್ರಕ್ರಿಯೆ ಯಶಸ್ವಿ: ಕಿಡ್ನಿ ದಾನ ಮಾಡಿದ ಪುತ್ರಿ ರೋಹಿಣಿ ಆಚಾರ್ಯ