ಮೋದಿ ಸರಕಾರ ಅಧಿಕಾರದಲ್ಲಿರುವವರೆಗೆ ಯಾರೂ ಒಂದು ಇಂಚು ಭೂಮಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ: ಅಮಿತ್ ಶಾ
ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರ ಅಧಿಕಾರದಲ್ಲಿ ಇರುವವರೆಗೆ ಯಾರೂ ಕೂಡ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಎಲ್ಎಸಿ ಉದ್ದಕ್ಕೂ ಭಾರತ ಹಾಗೂ ಚೀನಾ ಪಡೆಗಳ ನಡುವಿನ ಘರ್ಷಣೆಯ ಬಗ್ಗೆ ಪ್ರತಿಪಕ್ಷಗಳು ಚರ್ಚೆಗೆ ಒತ್ತಾಯಿಸಿದಾಗ ಈ ಮಾತನ್ನು ಹೇಳಿದ್ದಾರೆ.
ಸಂಸತ್ ಭವನದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶಾ, “ರಾಜೀವ್ ಗಾಂಧಿ ಫೌಂಡೇಶನ್ನ ಎಫ್ಸಿಆರ್ಎ (ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ) ರದ್ದತಿ ಕುರಿತ ಪ್ರಶ್ನೆಗಳನ್ನು ತಪ್ಪಿಸಲು ಕಾಂಗ್ರೆಸ್ ಸಂಸತ್ತಿನಲ್ಲಿ ಗಡಿ ಸಮಸ್ಯೆಯನ್ನು ಪ್ರಸ್ತಾಪಿಸಿದೆ’’ ಎಂದು ಹೇಳಿದರು.
ರಾಜೀವ್ ಗಾಂಧಿ ಫೌಂಡೇಶನ್ (ಆರ್ಜಿಎಫ್) ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿದೆ ಎಂದು ಆರೋಪಿಸಿದ ಶಾ, ಇದು ಎಫ್ಸಿಆರ್ಎ ನಿಯಮಗಳಿಗೆ ಅನುಸಾರವಾಗಿಲ್ಲದ ಕಾರಣ ಅದರ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ನೆಹರೂ ಅವರ ಚೀನಾದ ಮೇಲಿನ ಪ್ರೀತಿಯಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸ್ಥಾನವನ್ನು ತ್ಯಾಗ ಮಾಡಲಾಗಿದೆ ಎಂದು ಶಾ ಹೇಳಿದರು.
ಭಾರತೀಯ ಸೈನಿಕರ ಶೌರ್ಯವನ್ನು ಶ್ಲಾಘಿಸಿದ ಶಾ, "ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇರುವವರೆಗೂ ನಮ್ಮ ಭೂಮಿಯನ್ನು ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ'' ಎಂದರು..