ಗಣರಾಜ್ಯೋತ್ಸವದಂದು ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆ ಸಾಧ್ಯತೆ
ಚಂಡೀಗಢ: ಗಣರಾಜ್ಯೋತ್ಸವದಂದು ಶಿಕ್ಷೆಯ ವಿನಾಯತಿಗೆ ಅರ್ಹರೆಂದು ಪರಿಗಣಿಸಲಾದ 51 ಪಂಜಾಬ್ ಕೈದಿಗಳ ಕಿರುಪಟ್ಟಿಯಲ್ಲಿ ಕಾಂಗ್ರೆಸ್ನ ನವಜೋತ್ ಸಿಂಗ್ ಸಿಧು Navjot Singh Sidhu ಕಾಣಿಸಿಕೊಂಡಿದ್ದಾರೆ, 1988 ರ ರೋಡ್ ರೇಜ್ ಪ್ರಕರಣದಲ್ಲಿ ಎಂಟು ತಿಂಗಳ ಜೈಲುವಾಸದ ನಂತರ ಸಿಧು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು The Times of India ವರದಿ ಮಾಡಿದೆ.
ಪ್ರಸ್ತಾವಿತ ಪಟ್ಟಿಯನ್ನು ಸಚಿವ ಸಂಪುಟ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಂಪುಟ ಸಭೆ ಒಪ್ಪಿಗೆ ನೀಡಿದ ನಂತರ ರಾಜ್ಯಪಾಲರ ಒಪ್ಪಿಗೆಗಾಗಿ ಹೆಸರುಗಳನ್ನು ಕಳುಹಿಸಲಾಗುವುದು.
“ರಾಜ್ಯ ಸರಕಾರವು ಅವರಿಗೆ (ಸಿಧು) ಯಾವುದೇ ವಿಶೇಷ ಪರಿಹಾರವನ್ನು ನೀಡುವುದಿಲ್ಲ. ಅವಧಿ ಪೂರ್ವ ಬಿಡುಗಡೆಗೆ ಒಂದು ನಿಶ್ಚಿತ ಮಾನದಂಡವಿದೆ. ಜೈಲಿನಲ್ಲಿ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರವೂ ದಂಡವನ್ನು ಪಾವತಿಸಲು ಸಾಧ್ಯವಾಗದೆ ಉಳಿದಿರುವ ಇತರ ಇಬ್ಬರು ಕೈದಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಜೈಲು ಶಿಕ್ಷೆಯ 60-70 ಶೇ.ಪೂರ್ಣಗೊಳಿಸಿದವರೂ ಇದ್ದಾರೆ’’ ಎಂದು ಜೈಲು ಇಲಾಖೆಯ ಮೂಲಗಳು ತಿಳಿಸಿವೆ.
ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮೇ 20 ರಂದು ನ್ಯಾಯಾಲಯದ ಮುಂದೆ ಶರಣಾದ ಅವರನ್ನು ಪಟಿಯಾಲ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ (ಪೂರ್ವ) ನಲ್ಲಿಸ್ಪರ್ಧಿಸಿ ಸೋತಿದ್ದರು.