ತ್ರಿವಳಿ ತಲಾಖ್ ಅಥವಾ ದ್ರೌಪದಿ ವಸ್ತ್ರಾಪಹರಣ; ಮೌನವಾಗಿ ವೀಕ್ಷಿಸುವವರೂ ತಪ್ಪಿತಸ್ಥರು: ಆದಿತ್ಯನಾಥ
ಲಕ್ನೋ,ಎ.17: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಸೋಮವಾರ ಇಲ್ಲಿ ತ್ರಿವಳಿ ತಲಾಖ್ ವಿಷಯ ಕುರಿತು ರಾಜಕಾರಣಿಗಳ ಮೌನವನ್ನು ಮಹಾಭಾರತದಲ್ಲಿಯ ದ್ರೌಪದಿ ವಸ್ತ್ರಾಪಹರಣ ಸನ್ನಿವೇಶಕ್ಕೆ ಹೋಲಿಸಿದರು.
ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸದೆ ಮೌನವಾಗಿರುವವರು ಅದನ್ನು ಪಾಲಿಸುತ್ತಿರುವವರಷ್ಟೇ ತಪ್ಪಿತಸ್ಥರಾಗಿದ್ದಾರೆ ಎಂದರು.
ತ್ರಿವಳಿ ತಲಾಖ್ ಕುರಿತು ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈ ವಿಷಯದಲ್ಲಿ ರಾಜಕಾರಣಿಗಳ ಮೌನ ತನಗೆ ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶವನ್ನು ನೆನಪಿಸುತ್ತದೆ. ಆಗಲೂ ಎಲ್ಲರೂ ಮೌನವಾಗಿದ್ದರು ಎಂದು ಅವರು ಹೇಳಿದರು.
ತ್ರಿವಳಿ ತಲಾಖ್ ಪದ್ಧತಿಗೆ ಅಂತ್ಯ ಹಾಡುವಂತೆ ಕರೆ ನೀಡಿದ ಅವರು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಪ್ರತಿಪಾದಿಸಿದರು.
ತ್ರಿವಳಿ ತಲಾಖ್ ವಿರುದ್ಧ ಹೋರಾಡಲು ಬಯಸುವ ಮುಸ್ಲಿಂ ಮಹಿಳೆಯರನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ ಮರುದಿನ ಆದಿತ್ಯನಾಥರ ಈ ಹೇಳಿಕೆ ಹೊರಬಿದ್ದಿದೆ.