ಜೀವಮಾನದ ಉಳಿತಾಯ 40 ಲಕ್ಷ ರೂ.ನ್ನು ಗೋಶಾಲೆ ಕಟ್ಟಲು ದಾನ ನೀಡಿದ ವೃದ್ಧೆ ಪೂಲ್ವತಿ
ಮಥುರಾ,ಮೇ 26 : ಉತ್ತರ ಪ್ರದೇಶದ ಗೋರಕ್ಷಣಾ ಅಭಿಯಾನಕ್ಕೆ 70 ವರ್ಷದ ವೃದ್ಧೆ ಫೂಲ್ವತಿ ಅವರು ದೊಡ್ಡ ಸ್ಫೂರ್ತಿಯಾಗಿದ್ದಾರೆ, ಮಧ್ಯಪ್ರದೇಶದ ಕತ್ನಿ ಎಂಬಲ್ಲಿನ ಈ ವಿಧವೆ ತಮ್ಮ ಜೀವಮಾನದ ಉಳಿತಾಯವಾದ ರೂ.40 ಲಕ್ಷ ರೂಪಾಯಿಯನ್ನು ಗೋಶಾಲೆಯೊಂದನ್ನು ನಿರ್ಮಿಸಲು ಮತ್ತಿತರ ಸಮಾಜ ಸೇವಾ ಕಾರ್ಯಗಳಿಗೆ ದಾನ ಮಾಡಿದ್ದಾರೆ.
ತಮ್ಮ ಪತಿ ಹಾಗೂ ಪುತ್ರಿ ಮೃತ ಪಟ್ಟ ಐದು ವರ್ಷಗಳ ನಂತರ ರಾಜ್ಯವನ್ನು ತೊರೆದು ಮಥುರಾಗೆ 1982ರಲ್ಲಿ ಆಗಮಿಸಿದ ಫೂಲ್ವತಿ ಅಲ್ಲಿನ ಬಂಕೆ ಬಿಹಾರಿ ದೇವಳಕ್ಕೆ ಬರುವ ಭಕ್ತಾದಿಗಳ ಚಪ್ಪಲಿ ಕಾಯುವ ಕೆಲಸವನ್ನು ಅಲ್ಲಿನ ಗೇಟ್ ಸಂಖ್ಯೆ 2ರಲ್ಲಿ ಮಾಡುತ್ತಿದ್ದಾರಲ್ಲದೆ ಭಕ್ತಾದಿಗಳಿಂದ ದೇಣಿಗೆ ಕೂಡ ಪಡೆಯುತ್ತಿದ್ದಾರೆ. ಈ ರೀತಿಯಾಗಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಸಮಯದಲ್ಲಿ ಸಂಗ್ರಹಿಸಿದ ಹಣ ಹಾಗೂ ಕತ್ನಿಯಲ್ಲಿದ್ದ ಅವರ ಸೊತ್ತು ಮಾರಿ ದೊರಕಿದ ಹಣವೂ ಸೇರಿಸಿ ರೂ. 40 ಲಕ್ಷ ರೂ. ಆಗಿದ್ದು ಅದನ್ನು ವೃಂದಾವನದಲ್ಲಿ ಗೋಶಾಲೆ ಹಾಗೂ ಧರ್ಮಶಾಲಾ ಒಂದನ್ನು ನಿರ್ಮಿಸಲು ಮತ್ತು ಬಂಕೆ ಬಿಹಾರಿ ದೇವಳದಲ್ಲಿ ಕೃಷ್ಣನಿಗೆ ಪೂಜೆ ಸಲ್ಲಿಸಲು ದಾನ ಮಾಡಿದ್ದಾರೆ.