ನಿರುದ್ಯೋಗಕ್ಕಿಂತ ಅಪೂರ್ಣ ಉದ್ಯೋಗದ ಸಮಸ್ಯೆ ಗಂಭೀರ: ನೀತಿ ಆಯೋಗದ ವರದಿಯಲ್ಲಿ ಉಲ್ಲೇಖ
ಹೊಸದಿಲ್ಲಿ, ಮೇ 28: ನಿರುದ್ಯೋಗಕ್ಕಿಂತ ಅರೆ ಉದ್ಯೋಗ(ಅಪೂರ್ಣ ಉದ್ಯೋಗ) ಗಂಭೀರ ಸಮಸ್ಯೆಯಾಗಿದ್ದು ಓರ್ವ ವ್ಯಕ್ತಿ ಮಾಡುವ ಕಾರ್ಯವನ್ನು ಎರಡು ಅಥವಾ ಹೆಚ್ಚಿನ ಜನರು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ.
ನೀತಿ ಆಯೋಗ ಸಿದ್ದಪಡಿಸಿರುವ 2018ರಿಂದ 2020ರವರೆಗಿನ ಮೂರು ವರ್ಷಾವಧಿಯ ಕರಡು ಕ್ರಿಯಾ ವರದಿಯಲ್ಲಿ ಅಧಿಕ ಉತ್ಪಾದಕತೆ ಮತ್ತು ಅಧಿಕ ಸಂಬಳದ ಉದ್ಯೋಗವನ್ನು ಸೃಜಿಸುವ ಬಗ್ಗೆ ಒತ್ತು ನೀಡಲಾಗಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡಿರುವ ಆಡಳಿತ ಸಮಿತಿಯ ಸದಸ್ಯರಿಗೆ ಈ ವರದಿಯನ್ನು ಎಪ್ರಿಲ್ 23ರಂದು ರವಾನಿಸಲಾಗಿದೆ.ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿದ್ದು ಇದಕ್ಕೆ ನರೇಂದ್ರ ಮೋದಿ ಸರಕಾರ ಕಾರಣ ಎಂದು ವಿಪಕ್ಷ ಕಾಂಗ್ರೆಸ್ ಇತ್ತೀಚೆಗೆ ಟೀಕಿಸಿತ್ತು.
ದೇಶದಲ್ಲಿರುವ ಉದ್ಯೋಗ ಪರಿಸ್ಥಿತಿಯ ಪರಾಮರ್ಶೆ ನಡೆಸುವ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ(ಎನ್ಎಸ್ಎಸ್ಒ) ಕಳೆದ ಮೂರು ದಶಕಗಳಿಂದ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಅಲ್ಪಪ್ರಮಾಣದಲ್ಲಿದೆ. ಭಾರತದ ಅಭಿವೃದ್ಧಿ ಮತ್ತು ಉದ್ಯೋಗದ ಅಭಿವೃದ್ಧಿಗೆ ಪರಸ್ಪರ ಸಂಬಂಧವಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ. 2012ರ ಆರ್ಥಿಕ ವರ್ಷದಲ್ಲಿ ಭಾರತದ ದುಡಿಯುವ ವರ್ಗದ ಶೇ.49ರಷ್ಟು ಮಂದಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದರೆ ಒಟ್ಟಾರೆ ದೇಶೀಯ ಉತ್ಪನ್ನದ ಶೇ.17ರಷ್ಟು ಪಾಲು ಮಾತ್ರ ಕೃಷಿ ಕ್ಷೇತ್ರದಿಂದ ಬಂದಿದೆ. 2007ರಲ್ಲಿ 650 ಬೃಹತ್ ಉದ್ದಿಮೆಗಳು ಶೇ.38ರಷ್ಟು ಉತ್ಪಾದಿಸಿದ್ದು ಕೇವಲ ಶೇ.ರಷ್ಟು ಕಾರ್ಮಿಕರಿಗೆ ಉದ್ಯೋಗ ನೀಡಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಸ್ಪರ್ಧಾತ್ಮಕ ಪರಿಸ್ಥಿತಿ ಎದುರಿಸಲು ದಕ್ಷಿಣ ಕೊರಿಯ, ಚೀನ, ತೈವಾನ್, ಸಿಂಗಪುರ ಮುಂತಾದ ರಾಷ್ಟ್ರಗಳ ರೀತಿಯಲ್ಲಿ , ಸೂಕ್ತ ಸಂಬಳ ಪಡೆಯುವ ಅರೆ ಕುಶಲ ಕಾರ್ಮಿಕರ ಪಡೆಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.
‘ಮೇಕ್ ಇನ್ ಇಂಡಿಯಾ’ ಅಭಿಯಾನ ಜಾಗತಿಕ ಮಾರುಕಟ್ಟೆಗೆ ಸೂಕ್ತವಾದ ವಸ್ತಗಳ ಉತ್ಪಾದನೆಗೆ ಪೂರಕವಾಗಬೇಕಿದೆ ಎಂದು ವರದಿ ತಿಳಿಸಿದೆ.