ಬ್ಯಾಂಕ್ ಕೆಲಸಕ್ಕೂ ಲಂಚ: ಕೇರಳ ಬಿಜೆಪಿಯಲ್ಲಿ ಹೊಸ ವಿವಾದ
ಮಂಜೇರಿ,ಜು. 22: ಮೆಡಿಕಲ್ ಕಾಲೇಜು ಲಂಚ ಹಗರಣದ ಬೆನ್ನಿಗೆ ಮಂಜೇರಿಯಲ್ಲಿ ಬಿಜೆಪಿಗೆ ಹೊಸ ಲಂಚ ಪ್ರಕರಣವೊಂದು ತಲೆನೋವಾಗಿ ಪರಿಣಮಿಸಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳಲ್ಲಿ ಕೆಲಸ ತೆಗೆಸಿಕೊಡುವ ಭರವಸೆ ನೀಡಿ ಮಲಪ್ಪುರಂ ಜಿಲ್ಲೆಯ ಪಕ್ಷದ ಪದಾಧಿಕಾರಿಯೊಬ್ಬರು ಹತ್ತು ಲಕ್ಷ ರೂಪಾಯಿ ಲಂಚ ಪಡೆದು ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಣ ನೀಡಿದ ವ್ಯಕ್ತಿ ಎರಡು ವಾರ ಮೊದಲು ಮಂಜೇರಿ ಸಿಐ ಎನ್.ಬಿ. ಶೈಜುರಿಗೆ ದೂರು ನೀಡಿದ್ದರೂ ಈವರೆಗೂ ಎಫ್ಐಆರ್ ದಾಖಲಿಸಿಲ್ಲ.
ಬಿಜೆಪಿ ಜಿಲ್ಲಾ ಪದಾಧಿಕಾರಿಯೊಬ್ಬನ ಜೊತೆ ಇನ್ನಿಬ್ಬರು ಸೇರಿ ಲಂಚ ಪಡೆದಿದ್ದಾರೆ ಎನ್ನಲಾಗುತ್ತಿದೆ. ಘಟನೆ ವಿವಾದವಾಗುವುದರೊಂದಿಗೆ ಹಣವನ್ನು ಮರಳಿಸಿ ಸಮಸ್ಯೆಯನ್ನು ರಾಜಿಯಲ್ಲಿ ಮುಗಿಸಲು ತೆರೆಮರೆಯ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ.
ಅದೇ ವೇಳೇ ಇಂತಹ ವ್ಯವಹಾರದ ವಿಚಾರವೇ ತನಗೆ ಗೊತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ವಿಷಯವೂ ಗೊತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಪದಾಧಿಕಾರಿ ತಿಳಿಸಿದ್ದಾರೆ. ಇದರ ತನಿಖೆಗೆ ಪಕ್ಷ ಸಮಿತಿಯನ್ನು ನೇಮಿಸಿದೆ. ಜಿಲ್ಲಾ ಘಟಕದ ಗುಂಪುಗಾರಿಕೆ ವಿಷಯ ಬಹಿರಂಗವಾಗಲು ಕಾರಣವಾಗಿದೆ ಎನ್ನಲಾಗಿದೆ.