ಮದುವೆಯಾಗಲು ನಿರ್ಧರಿಸಿದ ತೃತೀಯ ಲಿಂಗಿಗಳಿಗೆ ಕೊಲೆ ಬೆದರಿಕೆ
ಕಲ್ಲಿಕೋಟೆ, ಆ. 29: ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ ಕೇರಳದ ಇಬ್ಬರು ತೃತೀಯ ಲಿಂಗಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮಹಿಳೆಯಿಂದ ಪುರುಷನಾಗಿ ಬದಲಾದ ಆರವ್ ಅಪ್ಪುಕುಟ್ಟ ಮತ್ತುಪುರುಷನಿಂದ ಮಹಿಳೆಯಾದ ಸುಕನ್ಯ ಕೃಷ್ಣರಿಗೆ ಫೇಸ್ಬುಕ್ನಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.
ಅನಿವಾಸಿ ಭಾರತೀಯನಾದ ಆರವ್ ಮತ್ತು ಸಾಫ್ಟ್ವೇರ್ ಇಂಜಿನಿಯರ್ ಆದ ಸುಕನ್ಯ ಮದುವೆಯಾಗಲು ನಿರ್ಧರಿಸಿದ ವಿವವರನ್ನು ಪತ್ರಿಕೆಯೊಂದು ಬಹಿರಂಗಪಡಿಸಿತ್ತು. ನಂತರ ಇವರ ಪ್ರೇಮ ಮತ್ತು ವಿವಾಹಕ್ಕೆ ಸಂಬಂಧಿಸಿದ ವರದಿಯನ್ನು ಆನ್ಲೈನ್ ಮಾಧ್ಯಮಗಳು ಪ್ರಕಟಿಸಿದ್ದವು. ಇದನ್ನು ಸುಕನ್ಯಾ ಫೇಸ್ಬುಕ್ಗೆ ಶೇರ್ ಮಾಡಿದ್ದರು. ಇದಕ್ಕೆ ಸಿಕ್ಕಿದ ಮೊದಲ ಕಮೆಂಟ್ ಕೊಲೆ ಬೆದರಿಕೆಯಾಗಿದೆ.
(ಆರವ್ ಅಪ್ಪುಕುಟ್ಟ)
“ಇವರು ಕೊಲ್ಲಲ್ಪಡಬೇಕಾದವರು” ಎಂದು ಕಮೆಂಟ್ ಹಾಕಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಕೊಲೆ ಬೆದರಿಕೆ ಹಾಕಿದ ಮಾಯಂಕ್ ಎಂಬಾತನ ಪ್ರೊಫೈಲ್ ನಕಲಿಯೆಂದು ಗೊತ್ತಾಗಿದೆ.
ಇದಲ್ಲದೆ ಬೇರೆ ಆರು ಕೊಲೆ ಬೆದರಿಕೆಗಳು ಇವರ ವಿರುದ್ಧ ಬಂದಿವೆ. ಬೆದರಿಕೆಯ ಕುರಿತು ಇಬ್ಬರು ಬೆಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬೈಯಲ್ಲಿ ಇತ್ತೀಚೆಗೆ ಭೇಟಿಯಾದ ನಂತರ ಸುಕನ್ಯಾ ಮತ್ತು ಆರವ್ ಪರಸ್ಪರ ಪ್ರೇಮಿಸಿದ್ದಾರೆ. ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗಪರಿವರ್ತನೆ ಶಸ್ತ್ರಕ್ರಿಯೆ ಮಾಡಿಸಿಕೊಂಡ ಇವರು ಮದುವೆಯಾಗಲು ತೀರ್ಮಾನಿಸಿದರು.
ಕೋಟ್ಟಯಂ ಮುಂಡಕೈಯಲ್ಲಿ ಜನಿಸಿದ ಬಿಂದು(ಆರವ್) ಹೈಸ್ಕೂಲ್ ಕಲಿಯುವಾಗಲೇ ತನ್ನ ಸ್ಥಿತಿಯ ಕುರಿತು ಗುರುತಿಸಿಕೊಂಡಿದ್ದರು. ಎರ್ನಾಕುಲಂ ತುಪ್ಪಣಿತ್ತರದ ಚಂದು(ಸುಕನ್ಯಾ) ಇಂಟರ್ ಸೆಕ್ಸ್ ಆಗಿ(ಪುರುಷ ಮತ್ತು ಮಹಿಳೆಯ ಗುಪ್ತಾಂಗವನ್ನು ಹೊಂದಿದ ಜನನ) ಜನಿಸಿದ್ದರು.
ಗಝೆಟ್ನಲ್ಲಿ ಹೆಸರುಬದಲಾಯಿಸಿಕೊಂಡಿದ್ದರು ಇತರ ದಾಖಲೆಗಳು ಸಿಕ್ಕಿದ ಬಳಿಕ ಸೆಪ್ಟಂಬರ್ನಲ್ಲಿ ಕಾನೂನು ಪ್ರಕಾರ ಮದುವೆಯಾಗಲಿದ್ದೇವೆ. ಯಾರು ವಿರೋಧಿಸಿದರೂ ಹಿಂದೆ ಸರಿಯುವುದಿಲ್ಲ. ಕೊಲೆಬೆದರಿಕೆಯನ್ನು ಕಾನೂನಿನ ಮೂಲಕ ಎದುರಿಸುತ್ತೇವೆ ಎಂದು ಆರವ್ ಮತ್ತು ಸುಕನ್ಯಾ ಹೇಳಿದ್ದಾರೆ.