ರೋಹಿಂಗ್ಯ ಮಕ್ಕಳಿಗೆ ನಿರಾಶ್ರಿತರ ಕಾರ್ಡ್ ವಿತರಿಸುವ ಪ. ಬಂ. ಸರಕಾರದ ಕಾರ್ಯಕ್ರಮ ದಿಢೀರ್ ರದ್ದಾಗಿದ್ದೇಕೆ?
ಕೊಲ್ಕತ್ತಾ, ಆ.31: ರೊಹಿಂಗ್ಯ ಮುಸ್ಲಿಮರು ತಾವು ಅಲ್ಲಿನ ಸೇನೆಯಿಂದ ಸಾಮೂಹಿಕ ಹತ್ಯೆಗೀಡಾಗಬಹುದೆಂದು ಬೆದರಿ ಮಯನ್ಮಾರ್ ತೊರೆಯುತ್ತಿದ್ದರೆ ಭಾರತದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯರನ್ನು ಹಿಂದಕ್ಕೆ ಕಳುಹಿಸುವಂತೆ ಭಾರತ ಸರಕಾರ ಸೂಚಿಸಿದೆ. ಈ ಬೆಳವಣಿಗೆಯ ನಡುವೆಯೇ ಪಶ್ಚಿಮ ಬಂಗಾಳದ ವಿವಿಧ ಮಕ್ಕಳ ನಿಲಯಗಳಲ್ಲಿರುವ 24 ರೊಹಿಂಗ್ಯ ಮಕ್ಕಳಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ನೀಡುವ ನಿರಾಶ್ರಿತರ ಕಾರ್ಡುಗಳನ್ನು ಒದಗಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ.
ಈ ಕಾರ್ಡುಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿ ಪಂಜ ಅವರು ಬುಧವಾರ ಹೌರಾದ ಲಿಲುವಹ್ ಎಂಬಲ್ಲಿರುವ ಎಸ್ಎಂಎಂ ಹೋಮ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ವಿತರಿಸುವ ಕಾರ್ಯಕ್ರಮವಿದ್ದರೆ, ಸಚಿವೆ ದಿಢೀರನೇ ತಮ್ಮ ಭೇಟಿ ರದ್ದುಪಡಿಸಿದ್ದರು. ಸಚಿವೆ ಅನಾರೋಗ್ಯಕ್ಕೀಡಾಗಿದ್ದರಿಂದ ಭೇಟಿ ರದ್ದುಪಡಿಸಲಾಯಿತು ಎಂದು ಇಲಾಖೆಯ ಕಾರ್ಯದರ್ಶಿ ರೋಶನಿ ಸೇನ್ ತಿಳಿಸಿದ್ದಾರೆ.
ಕಾರ್ಡು ವಿತರಣಾ ಸಮಾರಂಭ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮಾಧ್ಯಮಕ್ಕೆ ತಿಳಿಸಲಾಗಿದೆ.
ಬುಧವಾರ ನಡೆದ ಕಾರ್ಯಕ್ರಮಕ್ಕೆ ರಾಜ್ಯ ಮಕ್ಕಳ ಹಕ್ಕು ಆಯೋಗದ ಮುಖ್ಯಸ್ಥೆ, ಸ್ಥಳೀಯ ತೃಣಮೂಲ ಶಾಸಕ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಮಿಸಿದ್ದರೂ, ಅವರು ಗಿಡ ನೆಟ್ಟು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ತೆರಳಿದರೇ ವಿನಹ ಕಾರ್ಡ್ ವಿತರಣೆಯ ಬಗ್ಗೆ ಸೊಲ್ಲೆತ್ತಲಿಲ್ಲ.
ಸಮಾರಂಭಕ್ಕಿಂತ ಮೊದಲು ಅಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರ ಕಾರ್ಡ್ ಗಳನ್ನು ಲಿಲುವಹ್ ಹೋಮ್ ಇಲ್ಲಿನ 12 ಹುಡುಗಿಯರಿಗೆ ಹಾಗೂ ಇತರ ನಿಲಯಗಳ 12 ಮಕ್ಕಳಿಗೆ ನೀಡುವ ಬಗ್ಗೆ ಬ್ಯಾನರುಗಳನ್ನು ಹಾಕಲಾಗಿದ್ದರೂ, ಕಾರ್ಯಕ್ರಮ ನಡೆಯಲು ಇನ್ನೇನು ಅರ್ಧ ಗಂಟೆ ಇದೆ ಎನ್ನುವಾಗ ಅವುಗಳನ್ನು ತೆಗೆಯಲಾಯಿತು.
ನಿರಾಶ್ರಿತ ರೊಹಿಂಗ್ಯ ಮಕ್ಕಳಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ನಿರಾಶ್ರಿತರ ಕಾರ್ಡುಗಳನ್ನು ವಿತರಿಸಲು ನಿರ್ಧರಿಸುವ ಮೂಲಕ ಮಮತಾ ಕೇಂದ್ರಕ್ಕೆ ಸಡ್ಡು ಹೊಡೆಯಲಿದ್ದಾರೆಂದು ತಿಳಿಯಲಾಯಿತಾದರೂ, ಇದೀಗ ಈ ಕಾರ್ಯಕ್ರಮದ ರದ್ದತಿಯಿಂದಾಗಿ, ಮಮತಾ ಭೀತಿಗೊಳಗಾಗಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.