ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕುಲ್ದೀಪ್ ಹ್ಯಾಟ್ರಿಕ್ಗೆ ಕಾಂಗರೂ ಪಡೆ ಕಂಗಾಲು
ಕೋಲ್ಕತಾ, ಸೆ.21: ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೆ ಏಕದಿನ ಪಂದ್ಯವನ್ನು 50 ರನ್ಗಳ ಅಂತರದಿಂದ ಗೆದ್ದುಕೊಂಡಿದೆ.
ಈ ಗೆಲುವಿನ ಮೂಲಕ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಇಲ್ಲಿನ ಈಡನ್ಗಾರ್ಡನ್ಸ್ ಸ್ಟೇಡಿಯಂನಲ್ಲಿ ಗೆಲುವಿಗೆ 253 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ 43.1 ಓವರ್ಗಳಲ್ಲಿ ಕೇವಲ 202 ರನ್ಗಳಿಗೆ ಆಲೌಟಾಯಿತು. ಸ್ಟೋನಿಸ್ ಅಜೇಯ 65 ಎಸೆತಗಳಲ್ಲಿ 62ರನ್ ಗಳಿಸಿದ್ದು, ಇದರಲ್ಲಿ ಆರು ಬೌಂಡರಿ, 3 ಸಿಕ್ಸರ್ ಸೇರಿವೆ.
ಕುಲ್ದೀಪ್ ಯಾದವ್ 33ನೆ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದರೊಂದಿಗೆ ಆಸ್ಟ್ರೇಲಿಯಕ್ಕೆ ಶಾಕ್ ನೀಡಿದರು. ಕುಲ್ದೀಪ್ ಸತತ ಎಸೆತಗಳಲ್ಲಿ ಮ್ಯಾಥ್ಯೂ ವೇಡ್,ಆಸ್ಟನ್ ಅಗರ್ ಹಾಗೂ ಕಮ್ಮಿನ್ಸ್ ವಿಕೆಟ್ಗಳನ್ನು ಕಬಳಿಸಿ ಆಸೀಸ್ಗೆ ಶಾಕ್ ನೀಡಿದರು.
ಕುಲ್ದೀಪ್ ಏಕದಿನ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೆ ಬೌಲರ್ ಎನಿಸಿಕೊಂಡರು.
1987ರಲ್ಲಿ ನಾಗ್ಪುರದಲ್ಲಿ ನ್ಯೂಝಿಲೆಂಡ್ ವಿರುದ್ಧ ಚೇತನ್ ಶರ್ಮ ಹಾಗೂ 1991ರಲ್ಲಿ ಕೋಲ್ಕತಾದಲ್ಲಿ ಕಪಿಲ್ದೇವ್ ಈ ಸಾಧನೆ ಮಾಡಿದ್ದರು.
6ನೆ ಓವರ್ನಲ್ಲಿ ಆರಂಭಿಕ ಬ್ಯಾಟ್ಮನ್ಗಳನ್ನು ಕಳೆದುಕೊಳ್ಳುವುದರೊಂದಿಗೆ ಕಳಪೆ ಆರಂಭ ಪಡೆದಿತ್ತು.
3ನೆ ವಿಕೆಟ್ಗೆ 76 ರನ್ ಜೊತೆಯಾಟ ನಡೆಸಿದ ನಾಯಕ ಸ್ಟೀವನ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ತಂಡಕ್ಕೆ ಆಸರೆಯಾದರು. ಆಸೀಸ್ ಪರ ಸರ್ವಾಧಿಕ ರನ್ ಗಳಿಸಿದ ಸ್ಮಿತ್ 76 ಎಸೆತಗಳಲ್ಲಿ 8 ಬೌಂಡರಿ ಬಾರಿಸಿದರು. ಸ್ಮಿತ್ಗೆ ಸಮರ್ಥ ಸಾಥ್ ನೀಡಿದ ಹೆಡ್ 39 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 39 ರನ್ ಗಳಿಸಿದರು.
ಭಾರತದ ಪರ ಕುಲ್ದೀಪ್(3-54) ಹಾಗೂ ಭುವನೇಶ್ವರ ಕುಮಾರ್(3-9)ಯಶಸ್ವಿ ಬೌಲರ್ ಎನಿಸಿಕೊಂಡರು. ಹಾರ್ದಿಕ್ ಪಾಂಡ್ಯ()ಹಾಗೂ ಚಾಹಲ್(2-34)ತಲಾ 2 ವಿಕೆಟ್ ಪಡೆದರು.