“ಆಕ್ರಮಣಕಾರರು ಕಟ್ಟಿರುವ ಕೆಂಪುಕೋಟೆಯಲ್ಲಿ ಇನ್ನು ಮುಂದೆ ಮೋದಿ ಧ್ವಜಾರೋಹಣ ಮಾಡುವುದಿಲ್ಲವೇ?”
ಸಂಗೀತ್ ಸೋಮ್ ಹೇಳಿಕೆಗೆ ಉವೈಸಿ ಪ್ರತಿಕ್ರಿಯೆ
ಹೊಸದಿಲ್ಲಿ, ಅ.16: ವಿಶ್ವಪ್ರಸಿದ್ಧ ತಾಜ್ ಮಹಲ್ ಅನ್ನು ಆಕ್ರಮಣಕಾರರು ನಿರ್ಮಿಸಿದ್ದಾರೆ ಎನ್ನುವ ಬಿಜೆಪಿ ಶಾಸಕ ಸಂಗೀತ್ ಸೋಮ್ ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ, “ಕೆಂಪುಕೋಟೆಯನ್ನೂ ಸಹ ಆಕ್ರಮಣಕಾರರೇ ಕಟ್ಟಿದ್ದಾರೆ. ಆದ್ದರಿಂದ ಪ್ರಧಾನಿ ಮೋದಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
ತಾಜ್ ಮಹಲ್ ಭಾರತದ ಸಂಸ್ಕೃತಿಯ ಭಾಗವಲ್ಲ. ಏಕೆಂದರೆ ಇದನ್ನು ನಿರ್ಮಿಸಿದ ಶಹಜಹಾನ್ ಹಿಂದೂಗಳ ನಿರ್ಮೂಲನೆಗೆ ಯತ್ನಿಸಿದ್ದ. ಇಷ್ಟೇ ಅಲ್ಲದೆ ಬಾಬರ್, ಅಕ್ಬರ್ ಹಾಗು ಔರಂಗಜೇಬ್ ‘ದೇಶದ್ರೋಹಿಗಳು’ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಗೀತ್ ಸೋಮ್ ರ ವಿಡಿಯೋವೊಂದು ವೈರಲ್ ಆಗಿ ಭಾರೀ ವಿವಾದ ಸೃಷ್ಟಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿ ನಾಯಕ ಉಮರ್ ಅಬ್ದುಲ್ಲಾ, ಆಗಸ್ಟ್ 15ರಂದು ಇನ್ನು ಮುಂದೆ ಕೆಂಪುಕೋಟೆಯಲ್ಲಿ ಭಾಷಣವಿಲ್ಲವೇ?, ನೆಹರು ಸ್ಟೇಡಿಯಂನಿಂದ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.