ಕೆ.ಜಿ. ಶೆಣೈ
ಮಂಗಳೂರು, ಆ.3: ಸಿಂಡಿಕೇಟ್ ಬ್ಯಾಂಕಿನ ಮಾಜಿ ಮುಖ್ಯ ಪ್ರಬಂಧಕ ಮಣ್ಣಗುಡ್ಡ ವೇರ್ಹೌಸ್ ರಸ್ತೆ ನಿವಾಸಿ ಕೆ.ಜಿ. ಶೆಣೈ ಎಂದು ಚಿರಪರಿಚಿತರಾಗಿದ್ದ ಕಾರ್ಕಳ ಗೋವಿಂದ ಶೆಣೈ (86) ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಶೆಣೈ 1959ರ ಜುಲೈನಲ್ಲಿ ಸಿಂಡಿಕೇಟ್ ಬ್ಯಾಂಕ್ ಸೇರಿದರು. 1990ರಲ್ಲಿ ಮಣಿಪಾಲದಲ್ಲಿ ಮುಖ್ಯ ಪ್ರಬಂಧಕರಾಗಿ ಬ್ಯಾಂಕಿನಿಂದ ನಿವೃತ್ತರಾದರು. ಬ್ಯಾಂಕಿಂಗ್ ವೃತ್ತಿಜೀವನದ ಅವಧಿಯಲ್ಲಿ ಅವರು ಮುಂಬೈನಲ್ಲಿ ಬ್ಯಾಂಕಿನ ಕೈಗಾರಿಕಾ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದರು. ಮುಂಬೈನಲ್ಲಿ ಬ್ಯಾಂಕಿನ ಸ್ಥಳೀಯ ಸಾಲ ಸಮಿತಿಯ ಕಾರ್ಯದರ್ಶಿಯಾಗಿದ್ದರು.
ಇವರು ಆಟೋ ಮೊಬೈಲ್ ಉದ್ಯಮದೊಂದಿಗೆ ಜೀವಮಾನದ ಒಡನಾಟ ಹೊಂದಿದ್ದರು. ಸಿಂಡಿಕೇಟ್ ಬ್ಯಾಂಕಿನಿಂದ ನಿವೃತ್ತರಾದ ನಂತರ 1992ರಲ್ಲಿ ಮಂಗಳೂರಿನ ಅರವಿಂದ ಮೋಟಾರ್ಸ್ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಸೇರಿಕೊಂಡರು. 1999ರಿಂದ ಮಾರೂರ್ ಏಜೆನ್ಸಿಯೊಂದಿಗೆ ಗೌರವ ಸಲಹೆಗಾರರಾಗಿ ಸಂಬಂಧ ಹೊಂದಿದ್ದರು.
ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್ನೊಂದಿಗೆ ಸುಮಾರು ಮೂರು ದಶಕಗಳಿಂದ ಸಕ್ರಿಯವಾಗಿ ಸಂಬಂಧ ಹೊಂದಿದ್ದು, ಮೊದಲು ಸಂಘದ ಉಪಾಧ್ಯಕ್ಷರಾಗಿ ಮತ್ತು ನಂತರ ಅದರ ಪೋಷಕರಾಗಿ ಸೇವೆ ಸಲ್ಲಿಸಿದರು. ಅಖಿಲ ಭಾರತ ಆಟೋಮೊಬೈಲ್ ಬಿಡಿಭಾಗಗಳ ಡೀಲರ್ಗಳ ಸಂಘಗಳ ಒಕ್ಕೂಟ ನವದೆಹಲಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಜಿಲ್ಲಾ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್ನಿಂದ 2013ರಲ್ಲಿ ಅತ್ಯುತ್ತಮ ಕೊಡುಗೆ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಪ್ರಕಟನೆ ತಿಳಿಸಿದೆ.