ಸನ್ಮಾನದ ಹೆಸರಿನಲ್ಲಿ ಜಾತಿ ತಾರತಮ್ಯವೇಕೆ?
ಮಾನ್ಯರೇ,
ಮಾರ್ಚ್ 5ರಂದು ಸುಬ್ರಮಣ್ಯದಲ್ಲಿ ಜರುಗಲಿರುವ 22ನೇ ದ.ಕ. ಕಸಾಪದ ಸಮ್ಮೇಳನದಲ್ಲಿ ‘ವಿದ್ವತ್ ಸನ್ಮಾನ’ದ ಹೆಸರಿನಲ್ಲಿ ಕೇವಲ ಒಂದು ಧರ್ಮದ ಮತ್ತು ಕೆಲವು ನಿರ್ದಿಷ್ಟ ಜಾತಿಯ ಪುರುಷ ವ್ಯಕ್ತಿಗಳಿಗೆ ಮಾತ್ರ ಬೇರೆ ಪಂಕ್ತಿಯಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಇತರರನ್ನು ಅವಹೇಳನ ಮಾಡುವ ಕೆಲಸ ನಡೆಯುತ್ತಿದೆ. ಇದು ತೀವ್ರವಾಗಿ ಖಂಡಿಸಬೇಕಾದ ವಿಚಾರವಾಗಿದ್ದು, ಸಂಬಂಧಿಸಿದವರು ತಕ್ಷಣ ಈ ಪದ್ಧತಿಯನ್ನು ಕೈಬಿಡಬೇಕಾಗಿದೆ.
ಸರಕಾರದಿಂದ ದೊರೆಯುವ 5ಲಕ್ಷ ರೂ. ಬಳಸಿಕೊಂಡು ಸಾಮಾಜಿಕ ನ್ಯಾಯದಡಿ ಸಮ್ಮೇಳನ ನಡೆಸಬೇಕಾದ ದ.ಕ. ಕಸಾಪ ಈ ಹಿಂದೆಯೂ ಅನೇಕ ಬಾರಿ ಈ ರೀತಿ ನಡೆದುಕೊಂಡಿದ್ದು, ಈ ಬಾರಿಯೂ ಅದನ್ನೇ ಪುನರಾವರ್ತಿಸುತ್ತಿದೆ. ಪ್ರಗತಿಪರರೆಂದು ಬಿಂಬಿಸುವ ಒಂದಿಬ್ಬರು ಕೂಡಾ ಈ ಸನ್ಮಾನ ಸ್ವೀಕರಿಸಲು ಒಪ್ಪಿಗೆ ನೀಡಿರುವುದು ಆಶ್ಚರ್ಯಕರ ಮತ್ತು ವಿಷಾದನೀಯ. ಅಲ್ಲದೆ ದ.ಕ. ಕಸಾಪ ಕಾರ್ಯಕಾರಿ ಸಮಿತಿಯ ಪದನಿಮಿತ್ತ ಸದಸ್ಯರಾದ ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರು ಹಾಗೂ ಪರಿಶಿಷ್ಟ ಜಾತಿ/ವರ್ಗದ ಪ್ರತಿನಿಧಿ ಇದಕ್ಕೆ ಸಮ್ಮತಿ ನೀಡಿರುವುದು ಯಾಕೆ ಮತ್ತು ಹೇಗೆ?
ಆದ್ದರಿಂದ ಈ ಬಗ್ಗೆ ಸಮ್ಮೇಳನದ ಗೌರವಾಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ಸರಿಪಡಿಸಬೇಕಾಗಿದೆ. ಅಲ್ಲದೆ ಜಿಲ್ಲೆಯ ಅಲ್ಪ ಸಂಖ್ಯಾತ, ದಲಿತ, ಮಹಿಳಾ ಹಾಗೂ ಜಾತ್ಯತೀತ ಪ್ರಗತಿಪರ ಸಂಘಟನೆಗಳು ಈ ಬಗ್ಗೆ ಧ್ವನಿಗೂಡಿಸಬೇಕಾಗಿ ವಿನಂತಿ.