ಸುಪ್ರೀಂ ಕೋರ್ಟ್ಗೆ ಅವಮಾನ
ಮಾನ್ಯರೇ,
ಶಬರಿಮಲೆ ದೇವಸ್ಥಾನಕ್ಕೆ ಸ್ತ್ರೀಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲ ವಯೋಮಾನದ ಸ್ತ್ರೀಯರು ಶಬರಿಮಲೆ ದೇವಸ್ಥಾನವನ್ನು ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡಿದ ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪು ನಿಜಕ್ಕೂ ಸ್ವಾಗತಾರ್ಹ. ಆದರೆ ಸುಪ್ರೀಂ ಕೋರ್ಟ್ನ ಈ ತೀರ್ಪಿನ ವಿರುದ್ಧ ದೇಶದ ಮೂಲಭೂತವಾದಿಗಳು ಪ್ರತಿಭಟನೆ ನಡೆಸಿ ಸ್ತ್ರೀಯರು ದೇಗುಲವನ್ನು ಪ್ರವೇಶಿಸದಂತೆ ತಡೆಯುತ್ತಿರುವುದು ವಿಷಾದನೀಯ. ಧರ್ಮ, ದೇವರ ಹೆಸರಿನಲ್ಲಿ ಆಚರಣೆ, ನಂಬಿಕೆಗಳೆಂದು ಹೇಳಿಕೊಂಡು ತಾರತಮ್ಯ ಮಾಡುತ್ತಿರುವ ಮೂಲಭೂತವಾದಿಗಳು ವೈಜ್ಞಾನಿಕವಾಗಿ ನಾವು ಎಷ್ಟೇ ಸಾಧನೆಗಳನ್ನು ಮಾಡಿದ್ದರೂ ನಮ್ಮಲ್ಲಿರುವ ಮೌಢ್ಯಗಳು ಕಂದಾಚಾರಗಳು ಅನಿಷ್ಟ ಆಚರಣೆಗಳು ಬದಲಾಗುತ್ತಿಲ್ಲ ಮತ್ತು ಬದಲಾಗಲು ಬಿಡುವುದಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತಿದ್ದಾರೆ. ಮೌಢ್ಯದ ನೆಪದಿಂದ ಈ ಮೂಲಭೂತವಾದಿಗಳು ಈ ದೇಶದ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ಗೆ ಅವಮಾನ ಮಾಡುತ್ತಿದ್ದಾರೆ. ನಮ್ಮ ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಸಮಾನತೆ ತತ್ವದ ಆಶಯಕ್ಕೆ ಈ ಮೂಲಭೂತವಾದಿಗಳು ಮಸಿ ಬಳಿಯುತ್ತಿದ್ದಾರೆ. ಮನುಸ್ಮತಿ ಆರಾಧಕರಾದ ಈ ಮೂಲಭೂತವಾದಿಗಳು ಸ್ತ್ರೀ ಸ್ವಾತಂತ್ರ್ಯ, ಸಮಾನತೆಗೆ ಅರ್ಹಳಲ್ಲ ಎಂಬ ಮನಸ್ಥಿತಿಯನ್ನು ಮುಂದುವರಿಸುತ್ತಿರುವುದು ಸಂಪ್ರದಾಯದ ಹೆಸರಿನಲ್ಲಿ ಇಡೀ ಸ್ತ್ರೀ ಸಮೂಹಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಇದು ಖಂಡನೀಯ.