'ಕಳೆದು ಹೋದ ನನ್ನ ಮೊಬೈಲ್ ಮತ್ತೆ ಸಿಕ್ಕಿದ್ದು ಪವಾಡ'
ಮನೆಗೇ ಬಂದು ತಂದುಕೊಟ್ಟು ಅನಸ್
ಅಕ್ಟೋಬರ್ 11, 2020 ರವಿವಾರ, ಮಧ್ಯಾಹ್ನ ಸುರತ್ಕಲ್ ಅಂಚೆ ಕಚೇರಿಯ ಸನಿಹದಲ್ಲಿರುವ ಸುರಕ್ಷಾ ಲ್ಯಾಬ್ ಗೆ ರಕ್ತ ಪರೀಕ್ಷೆಗೆಂದು ಹೋಗಿ ವಾಪಾಸು ಬಂದು ನನ್ನ ಹೊಂಡಾ ಆಕ್ಟಿವಾದಲ್ಲಿ ಕೂರುವ ಮೊದಲು ಮೊಬೈಲನ್ನು ನನ್ನ ಬರ್ಮುಡಾದ ಕಿಸೆಯಲ್ಲಿ ತೂರಿಸಿ ಅವಸರದಲ್ಲಿ ಮನೆಯ ಕಡೆಗೆ ಹಿಂದಿರುಗಿ ಮನೆಯಲ್ಲಿ ನೋಡುವಾಗ ಮೊಬೈಲ್ ನಾಪತ್ತೆ, ನನ್ನ ಪೂರಾ ವಿವರಗಳನ್ನು ಒಳಗೊಂಡ ಮೊಬೈಲ್ ಕಳೆದುಕೊಂಡ ದುಃಖ.
ಎಲ್ಲಿ ಹುಡುಕಿದರೂ ಸಿಗದ ಮೊಬೈಲ್, ದಾರಿ ಕಾಣದೆ ಪೆಚ್ಚಾಗಿ ಹಿಂದೆ ಬಂದು, ಮರುದಿನ ಡೂಪ್ಲಿಕೇಟ್ ಸಿಮ್ ಗಳು, ಹೊಸ ಮೊಬೈಲ್ ಕೊಂಡು ಈ ದುರ್ಭಿಕ್ಷದ ಕಾಲದಲ್ಲಿ ಅಧಿಕ ಮಾಸ ಎಂದ ಹಾಗೆ - 15,000 ವೆಚ್ಚ, ಗೂಗಲ್ ನ ಫೈಂಡ್ ಮೈ ಡಿವೈಸ್ ನಲ್ಲಿ ಹುಡುಕಿದರೂ ಆನ್ ಆಗದ ಮೊಬೈಲ್, ದಿನ ಕಳೆದಂತೆ ನೆನಪು ಮಾಸಿತು.
27, ಅಕ್ಟೋಬರ್ 2020 ರ ಮಧ್ಯಾಹ್ನ ನಾನು ನನ್ನ ಕೆಲಸದಲ್ಲಿ ಮಗ್ನ, ಇದ್ದಕ್ಕಿದ್ದಂತೆ ಮಗಳ ಫೋನ್, ಅಪ್ಪಾ ಮೊಬೈಲ್ ಸಿಕ್ಕಿತು, ಸೂರತ್ಕಲ್ ನ ಮೂಡಾ ಬಿಲ್ಡಿಂಗ್ ನಲ್ಲಿ ಏರ್ ವಾಯ್ಸ್ ಹೆಸರಿನ ಮೊಬೈಲ್ ಅಂಗಡಿಯ ಮಾಲಕ ಅನಸ್ ಎನ್ನುವರು ಮನೆಗೇ ಬಂದು ವಿಷಯ ತಿಳಿಸಿ, ರಾತ್ರಿ ನಂತರ ಮೊಬೈಲ್ ವಾಪಸ್ ತಂದು ಕೊಟ್ಟರು.
ಶ್ರೀಯುತ ಅನಸ್ ರ ಪ್ರಾಮಾಣೀಕತೆಗೆ ನಾನು ಏನೆಂದು ಹೇಳಲಿ, ಕೃತಜ್ಞತೆ ಹೇಳಬಲ್ಲೆ, ಬಕ್ಷೀಸನ್ನು ಸಹಾ ನಿರಾಕರಿಸಿದ ವ್ಯಕ್ತಿ ಅವರು. ನನ್ನ ಮೊಬೈಲ್ ನಂ., ವಿಳಾಸವನ್ನು ಅತ್ಯಂತ ಚಾಕಚಕ್ಯತೆಯಿಂದ ಹುಡುಕಿ, ನನ್ನ ಮನೆಗೇ ಬಂದು ಮೊಬೈಲ್ ವಾಪಸ್ ಕೊಟ್ಟ ವ್ಯಕ್ತಿಗೆ ನಾನು ಈ ಮೂಲಕ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತಿದ್ದೇನೆ. ಶ್ರೀಯುತ ಅನಸ್ ರಿಗೆ, ಎಲ್ಲ ಮುಸ್ಲಿಂ ಬಾಂಧವರಿಗೆ ಮೀಲಾದುನ್ನಬಿ ಅತ್ಯಂತ ಶುಭಕರವಾಗಿರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಿದ್ದೇನೆ
ವಂದನೆಗಳು,
ಎ. ನಾರಾಯಣ ಪ್ರಸಾದ್
ಗ್ರಾಫಿಕ್ ಡಿಸೈನರ್, ಎನ್ಎಂಪಿಟಿ ಕಾಲನಿ, ಹೊಸಬೆಟ್ಟು, ಮಂಗಳೂರು