ಕೋಮುದ್ವೇಷ ಹಬ್ಬಿಸುವ ವಿಕೃತ ಮನಸ್ಸುಗಳು...
ಮೇ 4, 2021ರಂದು ಬೆಳಗ್ಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿದ್ದಾಗ, ಖ್ಯಾತ ರಂಗಕರ್ಮಿ, ನಿರ್ದೇಶಕ, ಚಲನಚಿತ್ರ ನಟ ಹಾಗೂ ಮಾಜಿ ಪತ್ರಕರ್ತರಾಗಿರುವ ಪ್ರಕಾಶ್ ಬೆಳವಾಡಿಯವರ ಆಂಗ್ಲಭಾಷೆಯ ಪೋಸ್ಟನ್ನು ಕಂಡು ಭಯವಾಯಿತು; ವೇದನೆಯು ಕೂಡ. ಅದರ ಭಾವಾನುವಾದ ಹೀಗಿದೆ:
‘‘ಫೆಬ್ರವರಿ 27, 2002ರ ಬೆಳಗ್ಗೆ ಗೋಧ್ರಾ ಬಳಿ ರೈಲಿನಲ್ಲಿ 59 ಮಂದಿ ಕರಸೇವಕರನ್ನು ಸುಟ್ಟು ಕೊಂದಾಗ, ನನ್ನ ಒಬ್ಬ ಲಿಬರಲ್ ಗೆಳೆಯ (ಪ್ರಸ್ತುತ ಆತನ ಜೊತೆ ಗೆಳೆತನವಿಲ್ಲ) ಅಹ್ಮದಾಬಾದಿನಿಂದ ಫೋನ್ ಮಾಡಿ, ‘ಇದು ಸಂಘಿಗಳಿಗೆ ಪಾಠವನ್ನು ಕಲಿಸುತ್ತದೆ’ ಎಂದೇನೋ ಹೇಳಿದ್ದ. ನಾನು ‘ಇದಕ್ಕೆ ಪ್ರತೀಕಾರ ಅತಿಶೀಘ್ರವಾಗಿ ಮತ್ತು ಭಯಾನಕವಾಗಿ ಜರುಗಲಿದೆ’ ಎಂದು ಹೇಳಿದೆ. ಅದು ನಾನು ಹೇಳಿದಂತೆಯೇ ಆಯಿತು.
ಆದರೆ ಗುಜರಾತಿನಲ್ಲಿ ಜರುಗಿದ ಕೋಮು ಗಲಭೆ ಏಕಪಕ್ಷೀಯವಾಗಿತ್ತು. ಏಕೆಂದರೆ, ಅಲ್ಲಿ ಮುಸಲ್ಮಾನರ ಜನಸಂಖ್ಯೆ ಕೇವಲ ಶೇ. 8ರಷ್ಟು ಮಾತ್ರ ಇತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನರ ಸಂಖ್ಯೆ ಶೇ. 30ಕ್ಕಿಂತಲೂ ಹೆಚ್ಚಿದೆ. ಹೀಗಾಗಿ, ಪ್ರತೀಕಾರ ತ್ವರಿತವಾಗುವುದಿಲ್ಲ. ಆದರೆ ಅಲ್ಲಿ ಪ್ರತೀಕಾರ ಜರುಗಿಯೇ ಜರುಗುತ್ತದೆ. ಹಿಂದೂ-ಮುಸಲ್ಮಾನ ಕೋಮು ಗಲಭೆ ಆಗಿಯೇ ತೀರುತ್ತದೆ. ಆದಾಗ, ಅದು ಬಹಳ ಕ್ರೂರ, ದುರಂತಮಯ ಹಾಗೂ ಸಂಘಟಿತವಾಗಿರುತ್ತದೆ. ಪ್ರಸ್ತುತ ಈ ವಿಷಯದ ಬಗೆಗೆ ಬಹಳ ಶಾಂತವಾಗಿರುವಂತೆ ವರ್ತಿಸುತ್ತಿರುವ ರಾಜ್ಯ ಸರಕಾರ ಮತ್ತು ಸಂಘಿಗಳಿಗೆ ಇದೇ ರೀತಿ ಆಗಬೇಕು ಎಂದು ಬಯಸುತ್ತಿರುವ ಲಿಬರಲ್ಗಳಿಗೆ ನಂತರ ಇದರ ತೀವ್ರತೆಯ ಅರಿವಾಗುತ್ತದೆ. ಇದನ್ನು ತಡೆಯಲು ಈಗಾಗಲೇ ತಡವಾಗಿದೆ. ಆದರೆ ಈ ಗಲಭೆ ಜರುಗುವುದು ಅನಿವಾರ್ಯವಾಗಿದೆ.’’
ನಮ್ಮ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕೋಮು ಸೌಹಾರ್ದದ ಪರಂಪರೆ ಇದೆ. ರಾಜಕೀಯ, ಸಾಮಾಜಿಕ, ಮತಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅನೇಕ ಖ್ಯಾತನಾಮರು ಮತ್ತು ಸಾಮಾನ್ಯರು ಇದನ್ನು ಪೊರೆಯುವ ನಿಟ್ಟಿನಲ್ಲಿ ಗಮನೀಯ ಕೊಡುಗೆಗಳನ್ನು ನೀಡಿದ್ದಾರೆ. ಇದು ನಮ್ಮ ಸಮ್ಮಿಳಿತ ಸಂಸ್ಕೃತಿಯ ಬೆನ್ನೆಲುಬಾಗಿದೆ. ಹೀಗಾಗಿ, ನಮ್ಮಲ್ಲಿ ಏಕ ಸಂಸ್ಕೃತಿಯ ಸ್ವಾಮ್ಯವಿಲ್ಲ.
ಇಲ್ಲಿ ತಲೆತಲಾಂತರಗಳಿಂದ ಬಹುಮುಖಿ ಸಂಸ್ಕೃತಿ ನೆಲೆಸಿದೆ. ಇದುವರೆಗಿನ ನಮ್ಮ ದೇಶದ ಪ್ರಗತಿಯಲ್ಲಿ ಈ ಧನಾತ್ಮಕ ಅಂಶ ಕೂಡ ಪ್ರಧಾನ ಪಾತ್ರವನ್ನು ವಹಿಸಿದೆ. ಭವಿಷ್ಯದಲ್ಲಿ ಕೂಡ ಇದು ಮುಂದುವರಿಯುತ್ತದೆ. ಮುಂದುವರಿಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು.
ಕಳೆದ ಮೂರ್ನಾಲ್ಕು ದಶಕಗಳಲ್ಲಿ ಇತರ ಕ್ಷೇತ್ರಗಳಲ್ಲಿ ಜರುಗಿರುವಂತೆ ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲೂ ಕೆಲವು ಕ್ಷುದ್ರ ಬೆಳವಣಿಗೆಗಳಾಗಿವೆ. ಹಲವು ನಾಜೂಕಯ್ಯ ಮತ್ತು ನಾಜೂಕಮ್ಮಂದಿರು ಆಯಕಟ್ಟಿನ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿಕೊಂಡು ತಮ್ಮ ವೈಯಕ್ತಿಕ ಹಿತದಲ್ಲಿ, ಸಂಸ್ಕೃತಿಯ ಹೆಸರಿನಲ್ಲಿ, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವಂತಹ ಕೆಲಸಗಳನ್ನು ಸೂಕ್ಷ್ಮವಾಗಿ ಮಾಡುತ್ತಿದ್ದಾರೆ. ಕಾರ್ಪೊರೇಟ್ ಕುಳಗಳ ಸಖ್ಯದಲ್ಲಿ ಮಿಂಚುತ್ತಿದ್ದಾರೆ; ಧನವಂತರೂ ಆಗಿದ್ದಾರೆ. ಇಂತಹವರು ತಮ್ಮ ನೀಚ ಕೃತ್ಯಗಳನ್ನು ಬಹಿರಂಗಗೊಳ್ಳದಿರುವ ನಿಟ್ಟಿನಲ್ಲಿ ಎಲ್ಲ ತೆರನಾದ ಜಾಗರೂಕತಾ ಕ್ರಮಗಳನ್ನು ಜಾರಿ ಮಾಡುತ್ತಾರೆ. ಆದರೆ ನಮ್ಮ ಆಳುವ ವರ್ಗಗಳಿಗೆ, ತಮ್ಮ ಗುಪ್ತ ಅಜೆಂಡಗಳ ಅನುಷ್ಠಾನಗೊಳಿಸುವುದಕ್ಕೆ ಇಂತಹ ಛದ್ಮವೇಷಧಾರಿಗಳು ಬೇಕಾಗುತ್ತಾರೆ. ಇಂತಹವರು ಬಾಹ್ಯವಾಗಿ ಪ್ರಗತಿಪರರಂತೆ ತೋರುತ್ತಾರೆ. ಆಂತರ್ಯದಲ್ಲಿ ಪ್ರತಿಗಾಮಿಗಳಾಗಿರುತ್ತಾರೆ. ಇವರ ಹೇಳಿಕೆ/ನಿಲುವುಗಳನ್ನು ಗಮನಿಸುವ, ಅವುಗಳ ಹಿನ್ನೆಲೆಯಲ್ಲಿ ತಮ್ಮ ತೀರ್ಮಾನಗಳನ್ನು ರೂಪಿಸಿಕೊಳ್ಳುವ ದೊಡ್ಡ ಸಂಖ್ಯೆಯ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ನೈಜಾರ್ಥದಲ್ಲಿ, ಸಮಾಜಮುಖಿ, ಜನಮುಖಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಂವೇದನಾಶೀಲ ಮನಸ್ಸುಗಳು ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲಿವೆ.
ಹಿಂದೆ, ನಮ್ಮ ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗೆ ಹಲವು ಕ್ಷೇತ್ರಗಳ ಸಕ್ರಿಯ ಕಾರ್ಯಕರ್ತರ ಹೇಳಿಕೆ/ನಿಲುವುಗಳ ಬಗೆಗೆ ತೀವ್ರವಾದ ಕಾನೂನಿನ ಕ್ರಮಗಳನ್ನು ಜರುಗಿಸಲಾಗಿದೆ. ಪ್ರಕಾಶ್ ಬೆಳವಾಡಿಯವರ ಮೇಲೆ ಪ್ರಸ್ತಾಪಿಸಿರುವ ಫೇಸ್ಬುಕ್ ಪೋಸ್ಟ್ (ನಂತರ ಇದರ ವಿರುದ್ಧ ಪ್ರತಿಕ್ರಿಯೆಗಳು ಬಂದಾಗ ಅವರು ತಮ್ಮ ಫೇಸ್ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ) ನಮ್ಮ ಸಮಾಜದಲ್ಲಿ ಕೋಮು ವಿಷ/ದ್ವೇಷವನ್ನು ಪಸರಿಸಬಹುದಾದ ಆತಂಕಕಾರಿ ವಿಷಯಗಳನ್ನು ಒಳಗೊಂಡಿದೆ.
ಇದನ್ನು ಪ್ರಜ್ಞಾವಂತರು ಖಂಡಿಸಲೇಬೇಕು. ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಇಲಾಖೆ ಈ ಘಾಸಿಗೊಳಿಸುವಂತಹ ಸಂಗತಿಯ ಬಗೆಗೆ ಸೂಕ್ತವಾಗಿ ಮಧ್ಯಪ್ರವೇಶ ಮಾಡುವುದೇ ಎಂಬುದು ನಮ್ಮ ಸಾರ್ವಜನಿಕ ವಲಯದ ಮುಂದಿರುವ ಯಕ್ಷಪ್ರಶ್ನೆ.